ಬೆಂಗಳೂರು: ಚಾಪರ್ ಪ್ರಯಾಣ ವೆಚ್ಚದ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ತೀವ್ರ ವಾಗ್ವಾದ ಮುಂದುವರಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷದ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಕಾಂಗ್ರೆಸ್ನ ಮನ್ರೇಗಾ ಬಚಾವ್ ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಿದ ತಮ್ಮ ನಿರ್ಧಾರವನ್ನು ಪ್ರಶ್ನಿಸಿದ ಬಿಜೆಪಿ ನಾಯಕರಿಗೆ ಉತ್ತರಿಸಿದ ಸಿಎಂ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅವಧಿಯ ವೆಚ್ಚಗಳನ್ನು ಉದಾಹರಣೆಯಾಗಿ ಮುಂದಿಟ್ಟರು.
ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಹೆಲಿಕಾಪ್ಟರ್ ಪ್ರಯಾಣಗಳಿಗೆ ಸುಮಾರು ರೂ.37 ಕೋಟಿ ವೆಚ್ಚ ಮಾಡಲಾಗಿದೆ. ಆಗೇಕೆ ನೀವು ಪ್ರಶ್ನಿಸಲಿಲ್ಲ?” ಎಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿಗೆ ಅನೇಕ ತುರ್ತು ಹಾಗೂ ಪ್ರಮುಖ ಕಾರ್ಯಗಳು ಇರುವುದರಿಂದ, ಕೆಲ ಸಂದರ್ಭಗಳಲ್ಲಿ ಹೆಲಿಕಾಪ್ಟರ್ ಮತ್ತು ವಿಮಾನ ಪ್ರಯಾಣ ಅನಿವಾರ್ಯವಾಗುತ್ತದೆ ಎಂದು ಸಮರ್ಥಿಸಿಕೊಂಡರು.
ವಿಧಾನ ಪರಿಷತ್ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಚಾಪರ್ ಪ್ರಯಾಣವನ್ನು ಸಾರ್ವಜನಿಕ ಹಣದ ವ್ಯರ್ಥ ವೆಚ್ಚ ಎಂದು ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಪ್ರಜಾಪ್ರಭುತ್ವದಲ್ಲಿ ಟೀಕೆ ಮಾಡಲು ಅವಕಾಶವಿದ್ದರೂ ಅದು ರಚನಾತ್ಮಕವಾಗಿರಬೇಕು ಎಂದು ಹೇಳಿದರು.
ಇದಲ್ಲದೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರವಾಸಗಳಿಗೆ ಇದುವರೆಗೆ ರೂ.816 ಕೋಟಿ ವೆಚ್ಚವಾಗಿದೆ ಎಂದು ಉಲ್ಲೇಖಿಸಿದ ಸಿಎಂ, “ಅದು ಸಾರ್ವಜನಿಕ ಖಜಾನೆಗೆ ಹೊರೆ ಅಲ್ಲವೇ?” ಎಂದು ಪ್ರಶ್ನಿಸಿದರು.