ನವದೆಹಲಿ/ಬೆಂಗಳೂರು: ಪ್ರಕೃತಿ ವಿಕೋಪಗಳು ಮತ್ತು ತುರ್ತು ಸಂದರ್ಭಗಳಲ್ಲಿ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಲು ಕೇಂದ್ರ ಸರ್ಕಾರ ರೂಪಿಸಿರುವ ‘ಸೆಲ್ ಬ್ರಾಡ್ಕಾಸ್ಟ್ ಅಲರ್ಟ್’ ವ್ಯವಸ್ಥೆಯನ್ನು ದೇಶಾದ್ಯಂತ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
ಇಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ದೇಶದ ಹಲವೆಡೆ ಮೊಬೈಲ್ ಫೋನ್ಗಳಲ್ಲಿ ಜೋರಾದ ಎಚ್ಚರಿಕೆ ಧ್ವನಿ ಹಾಗೂ ಸಂದೇಶಗಳು ಕಾಣಿಸಿಕೊಂಡು ವಿಚಾರ ತಿಳಿಯದ ಜನರಲ್ಲಿ ಕೆಲಕಾಲ ಗೊಂದಲ ಉಂಟಾಯಿತು.
ದೂರಸಂಪರ್ಕ ಇಲಾಖೆ ಹಾಗೂ ಸಂಬಂಧಿತ ರಾಷ್ಟ್ರೀಯ ಸಂಸ್ಥೆಗಳ ಸಹಕಾರದಲ್ಲಿ ಅಭಿವೃದ್ಧಿಪಡಿಸಲಾದ ಈ ಸ್ವದೇಶಿ ತಂತ್ರಜ್ಞಾನ ಆಧಾರಿತ ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷೆ ಯಶಸ್ವಿಯಾಗಿ ನೆರವೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಲಕ್ಷಾಂತರ ಮೊಬೈಲ್ ಬಳಕೆದಾರರಿಗೆ ಪರೀಕ್ಷಾ ಅಲರ್ಟ್ ಸಂದೇಶಗಳು ತಲುಪಿವೆ.
ಈ ಹೊಸ ವ್ಯವಸ್ಥೆ ಸಾಮಾನ್ಯ SMS ಎಚ್ಚರಿಕೆಗಿಂತ ಹೆಚ್ಚು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಮಾಹಿತಿ ತಲುಪಿಸುವಂತೆ ವಿನ್ಯಾಸಗೊಳಿಸಲಾಗಿದೆ.
ತುರ್ತು ಸಂದರ್ಭಗಳಲ್ಲಿ ಗಮನ ಸೆಳೆಯುವ ರೀತಿಯಲ್ಲಿ ಜೋರಾದ ಧ್ವನಿ ಹಾಗೂ ಸ್ಪಷ್ಟ ಸಂದೇಶಗಳ ಮೂಲಕ ನಾಗರಿಕರಿಗೆ ತಕ್ಷಣದ ಎಚ್ಚರಿಕೆ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ.
ಭೂಕಂಪ, ಸುನಾಮಿ, ಚಂಡಮಾರುತದಂತಹ ಪ್ರಕೃತಿ ವಿಕೋಪಗಳ ಜೊತೆಗೆ ಅನಿಲ ಸೋರಿಕೆ, ರಾಸಾಯನಿಕ ಅಪಾಯಗಳು ಹಾಗೂ ಇತರ ಮಾನವ ನಿರ್ಮಿತ ತುರ್ತು ಪರಿಸ್ಥಿತಿಗಳಲ್ಲಿಯೂ ಈ ವ್ಯವಸ್ಥೆಯನ್ನು ಬಳಸಲಾಗುತ್ತದೆ.
ಯಾವುದೇ ವಿಳಂಬವಿಲ್ಲದೆ ಸ್ಥಳಾಧಾರಿತ (geo-targeted) ಎಚ್ಚರಿಕೆಗಳನ್ನು ನೀಡುವ ಸಾಮರ್ಥ್ಯ ಇದರ ಪ್ರಮುಖ ವೈಶಿಷ್ಟ್ಯವಾಗಿದೆ.
ಸಂಪೂರ್ಣವಾಗಿ ಕಾರ್ಯಾರಂಭವಾದ ನಂತರ, ಈ ವ್ಯವಸ್ಥೆಯು ಮೊಬೈಲ್ ಫೋನ್ ಸೆಟ್ಟಿಂಗ್ಗಳ ಮೇಲೆ ಅವಲಂಬಿಸದೆ ಎಲ್ಲ ಹ್ಯಾಂಡ್ಸೆಟ್ಗಳಿಗೂ ತುರ್ತು ಸಂದೇಶಗಳನ್ನು ತಲುಪಿಸಲಾಗುವುದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪರೀಕ್ಷಾ ಹಂತದಲ್ಲಿ ಇಂಗ್ಲೀಷ್, ಹಿಂದಿ ಹಾಗೂ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಸಂದೇಶಗಳನ್ನು ರವಾನಿಸಲಾಗಿದೆ. ಮೊಬೈಲ್ ಸೆಟ್ಟಿಂಗ್ಗಳಲ್ಲಿ ಟೆಸ್ಟ್ ಚಾನೆಲ್ ಸಕ್ರಿಯವಾಗಿದ್ದ ಬಳಕೆದಾರರಿಗೆ ಮಾತ್ರ ಈ ಅಲರ್ಟ್ಗಳು ತಲುಪಿವೆ ಎಂದು ಸ್ಪಷ್ಟಪಡಿಸಲಾಗಿದೆ. ಇದು ಕೇವಲ ಪರೀಕ್ಷಾ ಪ್ರಕ್ರಿಯೆಯಾಗಿದ್ದು, ಯಾವುದೇ ತುರ್ತು ಪರಿಸ್ಥಿತಿ ಇಲ್ಲ ಎಂದು ಸರ್ಕಾರ ತಿಳಿಸಿದೆ.