ಧಾರವಾಡ: ಧಾರವಾಡ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಚಟುವಟಿಕೆಗಳು ಜೋರಾಗಿವೆ. ಹತ್ಯೆ ಪ್ರಕರಣದಲ್ಲಿ ಶಿಕ್ಷೆ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಅವರನ್ನು ವಿಧಾನಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದ್ದು, ಕ್ಷೇತ್ರ ಖಾಲಿಯಾಗಿರುವುದರಿಂದ ಶೀಘ್ರದಲ್ಲೇ ಉಪಚುನಾವಣೆ ನಡೆಯಲಿದೆ.
ಕಾಂಗ್ರೆಸ್ ವಲಯದಲ್ಲಿ ಕುಲಕರ್ಣಿ ಅವರ ಪತ್ನಿ ವಿನಯ್ ಶಿವಲೀಲಾ ಕುಲಕರ್ಣಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಕುರಿತು ಚಿಂತನೆ ನಡೆಯುತ್ತಿದೆ ಎನ್ನಲಾಗುತ್ತಿದ್ದು, ಇದರ ಬೆನ್ನಲ್ಲೇ ಬೆಂಬಲಿಗರು ಆನ್ಲೈನ್ ಅಭಿಯಾನ ಆರಂಭಿಸಿದ್ದಾರೆ.
ಸಹಾನುಭೂತಿ ಹಾಗೂ ಕುಲಕರ್ಣಿ ಅವರ ಕ್ಷೇತ್ರ ಸೇವೆ ಮತದಾರರ ಮೇಲೆ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಅವರದ್ದಾಗಿದೆ.
ಇನ್ನೊಂದೆಡೆ ಬಿಜೆಪಿಯಲ್ಲಿ ಮಾಜಿ ಶಾಸಕ ಅಮೃತ್ ದೇಸಾಯಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ. ಕ್ಷೇತ್ರದೊಂದಿಗೆ ಉತ್ತಮ ಸಂಪರ್ಕ ಮತ್ತು ಹಿಂದಿನ ಗೆಲುವಿನ ಅನುಭವ ಅವರ ಪರ ಕೆಲಸ ಮಾಡಲಿದೆ ಎಂದು ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜಕೀಯದಲ್ಲಿ ಯಾವ ಕ್ಷಣದಲ್ಲೂ ಬದಲಾವಣೆ ಸಂಭವಿಸಬಹುದು. ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ,” ಎಂದು ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದ್ದಾರೆ.
ಶಿವಲೀಲಾ ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿಯ ಅಧ್ಯಕ್ಷೆ. ಕುಟುಂಬ ಸದಸ್ಯರಿಗೆ ಅವಕಾಶ ನೀಡುವುದರಿಂದ ಸ್ವಲ್ಪ ವಿರೋಧ ಉಂಟಾಗಬಹುದು. ಬಿಜೆಪಿ ಪರವಾಗಿ ಈಗ ದೇಸಾಯಿ ಹೊರತುಪಡಿಸಿ ಬೇರೆ ಹೆಸರುಗಳು ಕೇಳಿಬರುತ್ತಿಲ್ಲವಾದರೂ, ಉಪಚುನಾವಣೆಯ ಕಾವು ಹೆಚ್ಚಿದಂತೆ ರಾಜಕೀಯ ಚಿತ್ರಣ ಬದಲಾಗುವ ಸಾಧ್ಯತೆ ಇದೆ ಎಂದು ರಾಜಕೀಯ ತಜ್ಞರೊಬ್ಬರು ಹೇಳಿದ್ದಾರೆ.