ಬೆಂಗಳೂರು: ಬೆಂಗಳೂರು : ಪತ್ನಿ ಮತ್ತು ಮಕ್ಕಳನ್ನು ಮನೆಗೆ ಕಳುಹಿಸಿಕೊಡುವಂತೆ ಕೇಳಲು ಹೋದ ಅಳಿಯನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಮಾನವೀಯ ಘಟನೆ ಆನೇಕಲ್ ತಾಲೂಕಿನ ಕಾವಲಹೊಸಹಳ್ಳಿಯ ಜನತಾ ಕಾಲೋನಿಯಲ್ಲಿ ನಡೆದಿದೆ.
ಮೃತನನ್ನು 25 ವರ್ಷದ ನವೀನ್ ಎಂದು ಗುರುತಿಸಲಾಗಿದೆ. ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಇವರು ತಮಿಳುನಾಡಿನ ಕೃಷ್ಣಗಿರಿ ಆಸ್ಪತ್ರೆಯಲ್ಲಿ ಮೇ 2 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ನವೀನ್ ಅವರು ಸಾಯುವ ಮುನ್ನ ಕೃಷ್ಣಗಿರಿ ಆಸ್ಪತ್ರೆಯಲ್ಲಿ ಮ್ಯಾಜಿಸ್ಟ್ರೇಟ್ ಎದುರು ಬೆಚ್ಚಿಬೀಳಿಸುವ ಹೇಳಿಕೆ ನೀಡಿದ್ದಾರೆ.
“ನನ್ನ ಮೇಲೆ ಮಾವ ಸಂಪಂಗಿ, ಬಾಮೈದ ಮುನೇಶ್, ಅತ್ತೆ ಪಚ್ಚಮ್ಮ ಹಾಗೂ ಪತ್ನಿ ಸುಚಿತ್ರಾ ಸೇರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಹೇಳಿಕೆಯನ್ನಾಧರಿಸಿ ಆನೇಕಲ್ ಪೊಲೀಸರು ಈ ಮೊದಲು ದಾಖಲಿಸಿದ್ದ ಕೊಲೆ ಯತ್ನ ಪ್ರಕರಣವನ್ನು ಈಗ ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಿದ್ದಾರೆ.
ನವೀನ್ ದಂಪತಿಗಳು ಆನೇಕಲ್-ತಳಿ ರಸ್ತೆಯ ಚೂಡೇನಹಳ್ಳಿಯಲ್ಲಿ ವಾಸವಾಗಿದ್ದರು. ನವೀನ್ ಮದ್ಯವ್ಯಸನಿಯಾಗಿದ್ದು ಪತ್ನಿಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವಿತ್ತು.
ಇದೇ ವಿಚಾರವಾಗಿ ಹಲವು ಬಾರಿ ರಾಜೀ ಪಂಚಾಯಿತಿಯೂ ನಡೆದಿತ್ತು. ಈ ನಡುವೆ ಯುಗಾದಿ ಹಬ್ಬದ ನೆಪದಲ್ಲಿ ತವರು ಮನೆಗೆ ಹೋಗಿದ್ದ ಪತ್ನಿ, ಹಲವು ದಿನಗಳು ಕಳೆದರೂ ಬಂದಿರಲಿಲ್ಲ. ಹೀಗಾಗಿ ಪತ್ನಿ-ಮಕ್ಕಳನ್ನು ವಾಪಸ್ ಕರೆತರಲು ಏಪ್ರಿಲ್ 14 ರಂದು ಅತ್ತೆ ಮನೆಗೆ ಹೋದಾಗ ಜಗಳ ಉಂಟಾಗಿ ಈ ಪೈಶಾಚಿಕ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ.
ಬಳಿಕ ಸ್ಥಳದಲ್ಲಿದ್ದ ಜನರು ನವೀನ್'ನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ತಮಿಳುನಾಡಿನ ಕೃಷ್ಣಗಿರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸುಮಾರು 19 ದಿನಗಳ ಚಿಕಿತ್ಸೆ ನಡೆದಿದ್ದು, ಇದೀಗ ನವೀನ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪ್ರಕರಣ ಸಂಬಂಧ ನವೀನ್ ಅವರ ಪತ್ನಿ ಮತ್ತು ಅತ್ತೆಯ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದ್ದು, ಅವರನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.