ಬೆಂಗಳೂರು: ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮಿತವ್ಯಯ ಸೂತ್ರ ಪಾಲನೆಗೆ ಕರೆ ನೀಡಿದ್ದು, ನಾವೂ ಮೋದಿಯವರ ಕರೆಗೆ ಬೆಂಬಲಿಸಿದ್ದೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶೇ.30ರಿಂದ ಶೇ.40ರಷ್ಟು ವಾಹನಗಳ ಬಳಕೆ ಕಡಿಮೆ ಮಾಡಲಿದ್ದು, ದಿನ ಬಿಟ್ಟು ದಿನ ಬೆಂಗಾವಲು ವಾಹನಗಳ ಬಳಕೆಗೆ ತೀರ್ಮಾನ ಮಾಡಿದ್ದೇವೆ. ಮದುವೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ತೆರಳಿದ ಸಂದರ್ಭದಲ್ಲಿ ಎಲ್ಲ ವಾಹನಗಳನ್ನು ಬಳಕೆ ಮಾಡುವುದಿಲ್ಲ.
ಇದಕ್ಕೆ ನಮ್ಮ ಮನೆಯ ಸದಸ್ಯರು ಬೆಂಬಲಿಸಿದ್ದಾರೆ. ಪ್ರಧಾನಿಯವರ ಮನವಿಗೆ ಸಾರ್ವಜನಿಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದ ಅವರು, ಮನೆಯಲ್ಲಿ ಬಳಸುವ ಅಡುಗೆ ಎಣ್ಣೆಯ ಪ್ರಮಾಣವನ್ನು ಕಡಿಮೆ ಮಾಡಲು ನಾನು ನನ್ನ ಮನೆಯವರಿಗೆ ಹೇಳಿದ್ದೇನೆ ಎಂದು ಅವರು ಹೇಳಿದರು.
ಕೇಂದ್ರ ಸಚಿವರು ಮತ್ತು ಅಧಿಕಾರಿಗಳು ಈಗಾಗಲೇ ಪ್ರಧಾನಿಯವರ ಕರೆಗೆ ಸ್ಪಂದಿಸಿದ್ದು ಮೆಟ್ರೋದಂತಹ ಸಾಮೂಹಿಕ ಸಾರಿಗೆ ವ್ಯವಸ್ಥೆಗಳನ್ನು ಬಳಸಲು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದರು. ಕೋಟಾವನ್ನು ಹಠಾತ್ತನೆ ಕಡಿಮೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಅಶೋಕ ಆರೋಪಿಸಿದರು.
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ನೇತೃತ್ವದ ಸಂಪುಟ ಉಪ ಸಮಿತಿ ವರದಿ ಮತ್ತು ಸದಾಶಿವ ಆಯೋಗದ ವರದಿಗಳನ್ನು ಅನುಸರಿಸಿ ಹಿಂದಿನ ಬಿಜೆಪಿ ಸರ್ಕಾರವು ಎಸ್ಸಿ ಮೀಸಲಾತಿಯನ್ನು 15% ರಿಂದ 17% ಕ್ಕೆ ಮತ್ತು ಎಸ್ಟಿಗಳಿಗೆ 3% ರಿಂದ 7% ಕ್ಕೆ ಹೆಚ್ಚಿಸಿದೆ ಎಂದು ಅವರು ಹೇಳಿದ್ದಾರೆ.