ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ದೇಶದ ಜನತೆಗೆ ಇಂಧನ ಮಿತವ್ಯಯದ ಬಗ್ಗೆ ಕರೆ ನೀಡಿದ್ದರು. ಪೆಟ್ರೋಲ್ ಮತ್ತು ಡೀಸಲ್ ಬಳಕೆಯನ್ನು ಕಡಿಮೆ ಮಾಡಬೇಕು, ಅನವಶ್ಯಕ ವಾಹನ ಸವಾರಿಯನ್ನು ತಗ್ಗಿಸಬೇಕು, ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಕೆಗೆ ಒತ್ತು ಕೊಡಬೇಕು ಎಂದು ಸಲಹೆ ನೀಡಿದ್ದರು.
ಪ್ರಧಾನಿಯ ಕರೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕೂಡ ತಮ್ಮ ನಡೆಗೆ ಬದಲಾವಣೆ ತರುವ ಪ್ರಯತ್ನ ಮಾಡಿದ್ದಾರೆ. ತಮ್ಮ ಅಧಿಕೃತ ಕಾರು ಮತ್ತು ಬೆಂಗಾವಲು ವಾಹನಗಳನ್ನು ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ಮೆಟ್ರೋ ರೈಲನ್ನು ಬಳಸುವ ನಿರ್ಧಾರ ಮಾಡಿದ್ದಾರೆ.
ಸಾರ್ವಜನಿಕರ ಸಾರಿಗೆ ಮೊರೆ ಹೋದ ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂಂದ್ರ ಸಾರ್ವಜನಿಕರ ಸಾರಿಗೆ ಮೊರೆ ಹೋಗಿದ್ದಾರೆ. ಪಕ್ಷದ ಸಭೆ, ಕಾರ್ಯಕ್ರಮಗಳಿಗೆ ಹೋಗುವಾಗ ಕಾರು ಬಿಟ್ಟು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ಇದಕ್ಕಾಗಿ ಅವರು ಮೆಜೆಸ್ಟಿಕ್ ನಿಂದ ಕೆಂಗೇರಿವರೆಗೂ ಮೆಟ್ರೋದಲ್ಲಿ ಪ್ರಯಾಣ ಮಾಡಿ, ಸಾಮಾನ್ಯ ಜನರ ನಡುವೆ ನಿಂತು, ಕುಳಿತು ಪ್ರಯಾಣಿಸಿದ್ದಾರೆ. ಇದೇ ರೀತಿಯಾಗಿ ಕುಂಬಳಗೂಡಿನ ಕಾರ್ಯಕ್ರಮಕ್ಕೂ ಮೆಟ್ರೋ ಮೂಲಕವೇ ತೆರಳಿದ್ದಾರೆ.
ಸಾರ್ವಜನಿಕ ಸಾರಿಗೆಯನ್ನು ಬಳಸುವ ಮೂಲಕ ಇಂಧನ ಉಳಿಸುವುದಷ್ಟೇ ಅಲ್ಲ, ಟ್ರಾಫಿಕ್ ದಟ್ಟಣೆ ಕಡಿಮೆ ಮಾಡುವಲ್ಲಿ ಸಹ ಸಹಾಯವಾಗುತ್ತದೆ ಎಂಬ ಸಂದೇಶವನ್ನು ಅವರು ತಮ್ಮ ನಡೆ ಮೂಲಕ ನೀಡಲು ಯತ್ನಿಸುತ್ತಿದ್ದಾರೆ.
ಪ್ರಧಾನಿ ಮೋದಿ ಮಾತಿಗೆ ಬೆಲೆ ಕೊಟ್ಟು ಈ ನಿರ್ಧಾರ
ನಮ್ಮ ಹೆಮ್ಮೆಯ ಪ್ರಧಾನಿ ಪೆಟ್ರೋಲ್, ಡೀಸೆಲ್ ಮಿತವ್ಯಯಕ್ಕೆ ಸಲಹೆ ಕೊಟ್ಟಿದ್ದಾರೆ. ಅವರು ಸ್ವತಃ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ. ಹಾಗಾಗಿ ನಾನು ಕೂಡ ಅವರ ಮಾತಿಗೆ ಸ್ಪಂದಿಸಿ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಕುಂಬಳಗೋಡಿನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಭಾಗವಹಿಸಿ, ಬಳಿಕ ರವಿಶಂಕರ್ ಗುರುಜಿಗಳ ಆಶೀರ್ವಾದ ಪಡೆದು ಬರುತ್ತೇನೆ ಎಂದು ಅವರು ತಿಳಿಸಿದ್ದಾರೆ.
ವಿಪಕ್ಷಗಳ ಟೀಕೆಗೆ ವಿಜಯೇಂದ್ರ ತಿರುಗೇಟು
ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಕುರಿತು ವಿಪಕ್ಷಗಳಿಂದ ಬರುತ್ತಿರುವ ಟೀಕೆಗಳ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಇಂಧನ ಬೆಲೆ ಏರಿಕೆ ಕಾರಣಕ್ಕೆ ಪ್ರಧಾನಿಯೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸುತ್ತಿರುವ ವಿಚಾರವನ್ನು ಅವರು ತೀವ್ರವಾಗಿ ವಿರೋಧಿಸಿದ್ದಾರೆ. ಪೆಟ್ರೋಲ್, ಡೀಸಲ್ ಬೆಲೆ ಏರಿಕೆಗಾಗಿ ಪ್ರಧಾನಿ ರಾಜೀನಾಮೆ ಕೇಳುವ ಹಾಗಿದ್ದರೆ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಎರಡು ವರ್ಷದ ಹಿಂದೆಯೇ ರಾಜೀನಾಮೆ ಕೊಡಬೇಕಿತ್ತು ಎಂದು ವಿಜಯೇಂದ್ರ ಟೀಕಿಸಿದ್ದಾರೆ.