ಬೆಂಗಳೂರು: SIR ಪ್ರಕ್ರಿಯೆಯು ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವ ಗುರಿ ಹೊಂದಿದ್ದು, ರಾಷ್ಟ್ರೀಯ ಹಿತಾಸಕ್ತಿ ಮತ್ತು ಭದ್ರತೆಗೆ ಪ್ರಮುಖವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಬಾಂಗ್ಲಾದೇಶಿ ವಲಸಿಗರ ಸಮಸ್ಯೆಯನ್ನು SIR ಪರಿಹರಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಈ ಪ್ರಕ್ರಿಯೆಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಅಶೋಕ್, ಅವರು ಯಾಕೆ ಈ ಪ್ರಕ್ರಿಯೆಗೆ ಹೆದರಬೇಕು? ಎಂದರು. ಕರ್ನಾಟಕದಲ್ಲಿ ಜೂನ್ 20 ರಿಂದ 5.55 ಕೋಟಿಗೂ ಹೆಚ್ಚು ಮತದಾರರನ್ನು ಒಳಗೊಂಡ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಆರಂಭವಾಗಲಿದೆ.
"ಕೆಲವು ಮುಸ್ಲಿಂ ಸಂಘಟನೆಗಳು SIR ಪ್ರಕ್ರಿಯೆ ವಿರೋಧಿಸಿ ಹೇಳಿಕೆಗಳನ್ನು ನೀಡಿವೆ. ಭಾರತದಲ್ಲಿ 2 ಕೋಟಿಗೂ ಹೆಚ್ಚು ಅಕ್ರಮ ಬಾಂಗ್ಲಾದೇಶಿ ವಲಸಿಗರಿದ್ದಾರೆ. ಅವರಲ್ಲಿ ಹೆಚ್ಚಿನವರು ಪಶ್ಚಿಮ ಬಂಗಾಳದಲ್ಲಿದ್ದಾರೆ, ನಂತರ ಅಸ್ಸಾಂ ಮತ್ತು ಬಿಹಾರದಲ್ಲಿದ್ದಾರೆ. 10 ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶಿಗಳು ಕರ್ನಾಟಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ. ಈ ಬಗ್ಗೆ ಯಾರಾದರೂ ನನಗೆ ಚಾಲೆಂಜ್ ಮಾಡಿದ್ರೆ, ಬೆಂಗಳೂರಿನಲ್ಲಿ ಅವರು ವಾಸಿಸುತ್ತಿರುವ ಪ್ರದೇಶಗಳನ್ನು ವೈಯಕ್ತಿಕವಾಗಿ ತೋರಿಸಲು ಸಿದ್ಧನಿದ್ದೇನೆ ಎಂದರು.
ಬೆಂಗಳೂರು ಪೊಲೀಸರು ಸುಮಾರು 250 ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸಿ, ಅವರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಲು ಭದ್ರತಾ ಸಂಸ್ಥೆಗಳಿಗೆ ಹಸ್ತಾಂತರಿಸಿದ್ದಾರೆ. 65 ಲಕ್ಷ ರೂ. ವೆಚ್ಚದಲ್ಲಿ ಅವರನ್ನು ಬೆಂಗಳೂರಿನಿಂದ ಗಡಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಲಾಗಿದೆ. ಇದು ದಾಖಲೆಯಲ್ಲಿದೆ. ಕಳೆದ ಒಂದು ತಿಂಗಳೊಳಗೆ ಇದು ನಡೆದಿದೆ ಎಂದರು.
ರಾಜ್ಯದಲ್ಲಿ ಒಬ್ಬ ಅಕ್ರಮ ಬಾಂಗ್ಲಾದೇಶಿ ವಲಸಿಗನೂ ಇಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಾರೆ, ಆದರೆ ವಾಸ್ತವ ಬೇರೆಯೇ ಇದೆ. ಅನೇಕರು ಮಹದೇವಪುರದ ಆರು ಸ್ಥಳಗಳಲ್ಲಿ ಟೆಂಟ್ಗಳಲ್ಲಿ ವಾಸಿಸುತ್ತಿದ್ದಾರೆ. ಚಿಕ್ಕಮಗಳೂರು ಮತ್ತು ಕೊಡಗಿನ ಕಾಫಿ ತೋಟಗಳಲ್ಲಿ ಕಡಿಮೆ ವೇತನದಲ್ಲಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಕೆಲವು ಅಕ್ರಮ ವಲಸಿಗರು ಕ್ರಿಮಿನಲ್ ಅಥವಾ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಬಹುದು ಎಂಬ ಕಳವಳ ವ್ಯಕ್ತಪಡಿಸಿದ ಅಶೋಕ್, SIR ಪ್ರಕ್ರಿಯೆಯು ಅಂತಹ ಸಮಸ್ಯೆ ತಡೆಯಲು ಸಹಾಯ ಮಾಡುತ್ತದೆ. SIR ಗೆ ಯಾಕೆ ಭಯಪಡಬೇಕು" ಎಂದು ಪ್ರಶ್ನಿಸಿದ ಅವರು, "ಹಿಂದೂ, ಮುಸ್ಲಿಂ ಅಥವಾ ಕ್ರಿಶ್ಚಿಯನ್ ಆಗಿರಲಿ, ಎಲ್ಲಾ ಭಾರತೀಯರಿಗೆ ಮತದಾನದ ಹಕ್ಕಿದೆ" ಎಂದರು.
ಈ ಪ್ರಕ್ರಿಯೆಯಲ್ಲಿ ಏನಾದರೂ ತಪ್ಪು ಆದರೆ ಮೇಲ್ಮನವಿ ಸಲ್ಲಿಸುವ ಹಕ್ಕಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಮತ್ತು ಬಿಜೆಪಿ ಮತ್ತು JD(S) ನಂತಹ ಪ್ರತಿಯೊಂದು ಬೂತ್ನಲ್ಲಿ ಕಾಂಗ್ರೆಸ್ ಏಜೆಂಟ್ಗಳನ್ನು ಹೊಂದಿದೆ. SIR ಪ್ರಕ್ರಿಯೆಯು ನಕಲಿ ಮತದಾರರನ್ನು ನಾಶಪಡಿಸುವ ಗುರಿಯನ್ನು ಹೊಂದಿದೆ. ಇದು ಭಾರತದ ಹಿತಾಸಕ್ತಿ ಮತ್ತು ರಾಷ್ಟ್ರೀಯ ಭದ್ರತೆಗೆ ಮುಖ್ಯವಾಗಿದೆ. ಇದು ಮೃತ ಮತದಾರರ ಮತ್ತು ಬಹು ರಾಜ್ಯಗಳಲ್ಲಿ ಮತದಾರರ ಪಟ್ಟಿಗಳಲ್ಲಿ ಹೆಸರು ಇರುವವರು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.