ಬೆಂಗಳೂರು: ವಿಶ್ವ ತಾಯಂದಿರ ದಿನದಂದು ತನ್ನ ತಾಯಿಗೆ ಶುಭಾಶಯ ಕೋರದ ಪತ್ನಿ ಮೇಲೆ ಪತಿಯೊಬ್ಬ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆಯೊಂದು ನಗರದಲ್ಲಿ ನಡೆದಿದೆ.
ಪತಿ ಪ್ರದೀಪ್ ಕುಮಾರ್ ವಿರುದ್ಧ ಪತ್ನಿ ಯಮುನಾಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೂಲತಃ ಬೆಂಗಳೂರು ಉತ್ತರ ತಾಲೂಕಿನ ಬೈಲಕೋನೇನಹಳ್ಳಿ ನಿವಾಸಿಯಾಗಿರುವ ಯಮುನಾ, 2022ರಲ್ಲಿ ಪ್ರೀತಿಸಿ ಪ್ರದೀಪ್ ಕುಮಾರ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಮೂರು ವರ್ಷದ ಮಗಳು ಇದ್ದಾಳೆ.
ಮದುವೆಯಾದ ದಿನದಿಂದಲೇ ಪತಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಮದ್ಯಪಾನ ಮಾಡಿ ಮನೆಗೆ ಬಂದು ಜಗಳ ಮಾಡುವುದು ಸಾಮಾನ್ಯವಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮೇ 10ರಂದು ವಿಶ್ವ ತಾಯಂದಿರ ದಿನದ ಅಂಗವಾಗಿ ಯಮುನಾ ತನ್ನ ತಾಯಿಯ ಫೋಟೋವನ್ನು ವಾಟ್ಸ್ಆಪ್ ಸ್ಟೇಟಸ್ನಲ್ಲಿ ಹಾಕಿ ಶುಭಾಶಯ ಕೋರಿದ್ದರು. ಆದರೆ, ತನ್ನ ತಾಯಿಯ ಫೋಟೋ ಹಾಕದಿರುವುದನ್ನು ಪ್ರಶ್ನಿಸಿ ರಾತ್ರಿ ಸುಮಾರು 8 ಗಂಟೆ ವೇಳೆಗೆ ಮದ್ಯದ ಅಮಲಿನಲ್ಲಿ ಮನೆಗೆ ಬಂದ ಪ್ರದೀಪ್ ಕುಮಾರ್ ಪತ್ನಿಯೊಂದಿಗೆ ಜಗಳ ಆರಂಭಿಸಿದ್ದಾನೆ ಎನ್ನಲಾಗಿದೆ.
ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಕಾಲಿನಿಂದ ಒದ್ದಿದ್ದಾನೆ ಎಂದು ಯಮುನಾ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಯಮುನಾ ತಮ್ಮ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಪೋಷಕರು ಕ್ಯಾಬ್ ಬುಕ್ ಮಾಡಿಕೊಂಡು ಮನೆಗೆ ಮರಳುವಂತೆ ಸಲಹೆ ನೀಡಿದ್ದು, ನಂತರ ಪೋಷಕರ ಮನೆಗೆ ತೆರಳಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಮೂರು ದಿನಗಳ ಬಳಿಕ ಯಮುನಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪತಿಯು ಪ್ರತಿದಿನ ಹಿಂಸೆ ನೀಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ವರದಕ್ಷಿಣೆ ತರಲು ಒತ್ತಡ ಹೇರುತ್ತಿದ್ದಾನೆ ಮತ್ತು ಈ ವಿಚಾರದಲ್ಲಿ ಅತ್ತೆಯೂ ಮಗನ ಪರ ನಿಂತು ಬೆಂಬಲ ನೀಡುತ್ತಿದ್ದಾಳೆ ಎಂದೂ ಆರೋಪ ಮಾಡಿದ್ದಾರೆ.
ಕುಟುಂಬದ ಸಮಸ್ಯೆ ಬಗೆಹರಿಸಲು ಯಮುನಾ ಪೋಷಕರು ಸುಮಾರು ಐದು ಬಾರಿ ಮಧ್ಯಸ್ಥಿಕೆ ನಡೆಸಲು ಪ್ರಯತ್ನಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಪತಿ ಹಾಗೂ ಅತ್ತೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.