ಬೆಳಗಾವಿ: ಪೊಲೀಸ್ ಅಧಿಕಾರಿಗಳು ಹಾಗೂ ಪ್ರಭಾವಿ ವ್ಯಕ್ತಿಗಳನ್ನು ಗುರಿಯಾಗಿಸಿ ಅತ್ಯಾಚಾರ, ವಂಚನೆ ಆರೋಪಗಳಲ್ಲಿ ಸುಳ್ಳು ದೂರುಗಳನ್ನು ನೀಡಿ ಹಣ ವಸೂಲಿ ಮಾಡುತ್ತಿದ್ದ ಮಹಿಳೆಯನ್ನು ಬೆಳಗಾವಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತೆಯನ್ನು ರೇಷ್ಮಾ ಶಂಕರ್ ಮುತಾಗರ್ ಎಂದು ಗುರುತಿಸಲಾಗಿದೆ. ಈಕೆಯ ಮೇಲೆ ರೌಡಿಶೀಟರ್ ತೆರೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.
ಶನಿವಾರ ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದುವೆಗೆ ಸಂಬಂಧಿಸಿದ ವಿವಿಧ ಆ್ಯಪ್ಗಳಲ್ಲಿ ಸುಂದರವಾದ ನಕಲಿ ಫೋಟೊಗಳನ್ನು ಹಾಕುವ ಈ ಮಹಿಳೆ ದೊಡ್ಡ ವ್ಯಕ್ತಿ, ಹಣವಂತರನ್ನು ಸೆಳೆಯಲು ಯತ್ನಿಸುತ್ತಿದ್ದರು. ನಿಗದಿತ ಸ್ಥಳಕ್ಕೆ ಅವರನ್ನು ಕರೆಸಿದ ಬಳಿಕ ಅತ್ಯಾಚಾರ ಎಸಗಿದ ಆರೋಪ ಮಾಡಿ ಹಣ ಕೀಳುವ ಸಂಚು ರೂಪಿಸುತ್ತಿದ್ದರು. ತನಗೆ ನ್ಯಾಯ ಕೊಡಿಸುವಂತೆ ಪೊಲೀಸರ ಬಳಿ ಹೋದಾಗ, ಅಲ್ಲಿಯೂ ಪೊಲೀಸ್ ಅಧಿಕಾರಿಯೇ ಅತ್ಯಾಚಾರ ಎಸಗಿದ್ದಾರೆ ಎಂದು ‘ಬ್ಲ್ಯಾಕ್ಮೇಲ್’ ಮಾಡುತ್ತಿದ್ದಳು ಎಂದು ಹೇಳಿದ್ದಾರೆ.
‘ಈ ಮಹಿಳೆ ಎಂಟು ತಿಂಗಳ ಹಿಂದೆ ಘಟಪ್ರಭಾ ಠಾಣೆಯಲ್ಲಿ ‘ತನಗೆ ಮೋಸ ಮಾಡಿ ಓಡಿ ಹೋಗಿದ್ದಾರೆ’ ಎಂದು ಒಬ್ಬ ವ್ಯಕ್ತಿ ವಿರುದ್ಧ ದೂರು ದಾಖಲಿಸಿದ್ದರು.
ತುಮಕೂರಿನಲ್ಲಿ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುವ ವ್ಯಕ್ತಿ ಮ್ಯಾಟ್ರಮೊನಿಯಲ್ಲಿ ಪರಿಚಯವಾಗಿ ಮದುವೆಯಾಗಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ಇಷ್ಟರ ಮೇಲೆ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ ಪೊಲೀಸ್ ಇನ್ಸ್ಪೆಕ್ಟರ್ ಮೇಲೂ ರೂ.1 ಲಕ್ಷ ಲಂಚ ಪಡೆದ ಬೆದರಿಕೆ ಹಾಕಿದ್ದಳು.
‘ಈ ಬಗ್ಗೆ ಬೈಲಹೊಂಗಲ ಡಿವೈಎಸ್ಪಿ ವೀರಯ್ಯ ಹಿರೇಮಠ ನೇತೃತ್ವದಲ್ಲಿ ತನಿಖೆ ಮಾಡಿಸಿದಾಗ ಮಹಿಳೆ ಸಿಕ್ಕಿಬಿದ್ದಿದ್ದಾರೆ. ಇದೇ ರೀತಿ ಪ್ರಕರಣಗಳನ್ನು ಇನ್ನೂ ಐದು ಠಾಣೆಗಳಲ್ಲಿ ಹೂಡಿದ್ದಾರೆ ಎಂಬುದು ಗೊತ್ತಾಗಿದೆ.
‘2012ರಲ್ಲಿ ಕುಡಚಿ ಠಾಣೆಯಲ್ಲಿ ಪಕ್ಕದ ಮನೆಯವರು ಪರಿಚಯವಾಗಿ ಮದವೆಯಾಗುವುದಾಗಿ ಮೋಸ ಮಾಡಿದ್ದಾರೆ ಎಂದು, 2022ರಲ್ಲಿ ಘಟಪ್ರಭಾದಲ್ಲಿ ನಾಗರಾಜ ಗದಗ ಎಂಬ ಕಾನ್ಸ್ಟೆಬಲ್ ಮೇಲೆ ಪ್ರಕರಣ ದಾಖಲಿಸಿದ್ದರು.
2023ರಲ್ಲಿ ಗಜೇಂದ್ರಗಡದ ಆಕಾಶ ಎಂಬುವವರ ಮೇಲೆ ಅತ್ಯಾಚಾರದ ದೂರು ದಾಖಲಿಸಿದ್ದಾರೆ. 2025ರಲ್ಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಸುರೇಶ ಎಂಬುವವರು ಮೋಸ ಮಾಡಿದ್ದಾರೆ ಎಂದು ಧಾರವಾಡ ಸಬರ್ಬ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವೆಲ್ಲವೂ ಸುಳ್ಳು ಕೇಸು ಎಂಬುದು ಗೊತ್ತಾಗಿದೆ’ ಎಂದು ತಿಳಿಸಿದರು.