ಬೆಂಗಳೂರು: ಯಶವಂತಪುರ ಪೊಲೀಸ್ ವ್ಯಾಪ್ತಿಯಲ್ಲಿರುವ ಆಭರಣ ವ್ಯಾಪಾರಿಯೊಬ್ಬರ ಮನೆಯಿಂದ ಸಹಾಯಕನೇ 27 ಲಕ್ಷ ರೂ. ನಗದು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.
63 ವರ್ಷದ ಜ್ಯುವೆಲರಿ ಅಂಗಡಿ ಮಾಲೀಕ ಎನ್. ನವರತ್ನ ಕುಮಾರ್ ಅವರ ಮನೆಯಲ್ಲಿ ಬಾಬು ಸಿಂಗ್ ಎಂಬಾತ ಕಳೆದ 18 ತಿಂಗಳಿಂದ ಸಹಾಯಕನಾಗಿ ಕೆಲಸ ಮಾಡುತ್ತಿದ್ದ.
ನವರತ್ನ ಕುಮಾರ್ ಅವರು ಅಂಗಡಿಯಿಂದ ತಂದಿದ್ದ ಹಣವನ್ನು ಬ್ಯಾಂಕ್ಗೆ ಜಮಾ ಮಾಡಲು ಮನೆಯಲ್ಲಿ ಇಟ್ಟಿದ್ದರು. ಬುಧವಾರ ರಾತ್ರಿ ಪತ್ನಿ ಜೊತೆ ಸಮೀಪದ ಔಷಧ ಅಂಗಡಿಗೆ ತೆರಳಿದ್ದರು.
ಈ ವೇಳೆ ಮನೆಯಲ್ಲಿ ಯಾರು ಇಲ್ಲದಿದ್ದ ಅವಕಾಶವನ್ನು ಬಳಸಿಕೊಂಡ ಆರೋಪಿ ಬಾಬು ಸಿಂಗ್, ಮನೆಯಲ್ಲಿದ್ದ 27 ಲಕ್ಷ ರೂ. ನಗದು ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿ ಮನೆಗೆ ಮರಳಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ತಿಳಿದುಬಂದಿದೆ. ಬಳಿಕ ಸ್ಪೇರ್ ಕೀ ಬಳಸಿ ಒಳಗೆ ಪ್ರವೇಶಿಸಿದಾಗ ಆರೋಪಿ ನಾಪತ್ತೆಯಾಗಿರುವುದು, ಹಣವೂ ಇಲ್ಲದಿರುವುದು ತಿಳಿದುಬಂದಿದೆ. ಫೋನ್ಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಫೋನ್ ಸ್ವಿಚ್ ಆಫ್ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ BNS ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ರಾಜಸ್ಥಾನಕ್ಕೆ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.