ಬಸ್ ಮುಷ್ಕರಕ್ಕೆ ಹೈಕೋರ್ಟ್ ತಡೆ  
ರಾಜ್ಯ

ಸಾರಿಗೆ ಸಂಘಟನೆಗಳಿಗೆ ಹೈಕೋರ್ಟ್ ಬ್ರೇಕ್: ಮೇ 20 ರಿಂದ ಮುಷ್ಕರ ನಡೆಸದಂತೆ ನಿರ್ಬಂಧ

ಸಾರಿಗೆ ಸಂಘಟನೆಗಳೊಂದಿಗೆ ಸರ್ಕಾರ ಚರ್ಚೆ ನಡೆಸಲಿ, ಮುಷ್ಕರ ಬೇಡ ಎಂದು ಹೈಕೋರ್ಟ್ ಹೇಳಿದ್ದು, ಸರ್ಕಾರ ಮತ್ತು ಸಾರಿಗೆ ಸಂಘಟನೆಗಳಿಗೆ ನೊಟೀಸ್ ನೀಡಿ ಸಾರಿಗೆ ಸಚಿವರೊಂದಿಗೆ ಸಭೆ ನಡೆಸಲು ಸೂಚಿಸಿದೆ.

ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದ ಸಾರಿಗೆ ನೌಕರರ ಸಂಘಗಳಿಗೆ ಹೈಕೋರ್ಟ್ ಮಂಗಳವಾರ ತಾತ್ಕಾಲಿಕ ತಡೆ ನೀಡಿದೆ.

ರಜೆ ಪೀಠದ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಕೆ ಮನ್ಮದಾ ರಾವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆ ನಡೆಸುವ ವೇಳೆ ಈ ಆದೇಶ ಹೊರಡಿಸಿದರು.

ಈ ಮುಷ್ಕರವನ್ನು ಜಂಟಿ ಕ್ರಿಯಾ ಸಮಿತಿ (JAC) ಕರೆ ನೀಡಿತ್ತು. ಇದರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮೆಟ್ರಾಪಾಲಿಟನ್ ಸಾರಿಗೆ ನಿಗಮ (BMTC), ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (NWKRTC) ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ (KKRTC) ನೌಕರರ ಸಂಘಗಳು ಸೇರಿದ್ದವು.

“ಪ್ರತಿವಾದಿ ಸಂಖ್ಯೆ 7 (JAC) ಮತ್ತು ಅದರ ಅಂಗ ಸಂಘಗಳು 29.04.2026ರ ಮುಷ್ಕರ ನೊಟೀಸ್ ಅನ್ವಯ ಮುಷ್ಕರ ನಡೆಸಬಾರದು” ಎಂದು ನ್ಯಾಯಾಲಯ ಆದೇಶಿಸಿದೆ. ಜೊತೆಗೆ, ಮುಷ್ಕರಕ್ಕೆ ಕರೆ ನೀಡಿದ ಸಂಘಗಳೊಂದಿಗೆ ಚರ್ಚೆ ನಡೆಸಲು ಸರ್ಕಾರ ದಿನಾಂಕ ನಿಗದಿ ಮಾಡಬೇಕು ಎಂದು ಸೂಚಿಸಿದೆ.

ಮುಂದಿನ ವಿಚಾರಣೆ 21ಕ್ಕೆ

ಸಂಘದ ಪ್ರತಿನಿಧಿಗಳು, ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗಳ ನಡುವಿನ ಸಭೆ ಯಾವಾಗ ನಡೆಯಬಹುದು ಎಂಬ ಬಗ್ಗೆ ಸೂಚನೆ ಪಡೆಯಲು ಹೆಚ್ಚುವರಿ ಎರಡು ದಿನಗಳ ಕಾಲಾವಕಾಶ ಬೇಕು ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ಆದೇಶದಲ್ಲಿ ದಾಖಲಿಸಲಾಗಿದೆ.

ಈ ಪ್ರಕರಣದ ಮುಂದಿನ ವಿಚಾರಣೆ ಮೇ 21ರಂದು ನಡೆಯಲಿದೆ. ಮುಷ್ಕರ ತಡೆಯುವಂತೆ ಕೋರಿ ಗೃಹಕಾರ್ಮಿಕ ಮಹಿಳೆಯೊಬ್ಬರು ಮತ್ತು ಕಟ್ಟಡ ಕಾರ್ಮಿಕನೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಬಸ್ ಮುಷ್ಕರ ನಡೆದರೆ ತಮ್ಮ ಜೀವನೋಪಾಯಕ್ಕೆ ತೊಂದರೆ ಆಗುತ್ತದೆ ಎಂದು ಅವರು ವಾದಿಸಿದ್ದರು.

ಬಾಕಿ ವೇತನ ಪಾವತಿ ಹಾಗೂ ವೇತನ ಹೆಚ್ಚಳದ ಬೇಡಿಕೆ ಈಡೇರದಿದ್ದರೆ ಮೇ 20ರಿಂದ ನಾಲ್ಕು ರಾಜ್ಯ ಸಾರಿಗೆ ನಿಗಮಗಳ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಕಾರ್ಮಿಕ ಸಂಘಗಳು ಎಚ್ಚರಿಕೆ ನೀಡಿದ್ದವು.

ಈ ಮುಷ್ಕರದಿಂದ ದಿನಗೂಲಿ ಕಾರ್ಮಿಕರು, ರೋಗಿಗಳು, ವೃದ್ಧರು, ಅಂಗವಿಕಲರು ಹಾಗೂ ಸಾರ್ವಜನಿಕ ಸಾರಿಗೆಯ ಮೇಲೆ ಅವಲಂಬಿತವಾಗಿರುವ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ತೀವ್ರ ತೊಂದರೆ ಉಂಟಾಗಲಿದೆ ಎಂದು ಅರ್ಜಿದಾರರು ವಾದಿಸಿದರು.

ಇದೀಗ ನಡೆಯುತ್ತಿರುವ 10ನೇ ತರಗತಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳ ಮೇಲೂ ಮುಷ್ಕರದ ಪರಿಣಾಮ ಬೀಳಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಮೇ 18ರಂದು ಆರಂಭವಾದ ಪರೀಕ್ಷೆಗಳು ಮೇ 25ರವರೆಗೆ ನಡೆಯಲಿದ್ದು, ಗ್ರಾಮೀಣ ಮತ್ತು ಅರೆನಗರ ಪ್ರದೇಶದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಲು KSRTC ಬಸ್‌ಗಳನ್ನೇ ಅವಲಂಬಿಸಬೇಕಾಗುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ಕೆಎಸ್ ಆರ್ ಟಿಸಿ, ಬಿಎಂಟಿಸಿ, ಎನ್ ಡಬ್ಲ್ಯುಕೆಆರ್ ಟಿಸಿ ಮತ್ತು ಕೆಕೆಆರ್ ಟಿಸಿ ಸಂಸ್ಥೆಗಳನ್ನು ಜೂನ್ 30ರವರೆಗೆ “ಸಾರ್ವಜನಿಕ ಉಪಯೋಗ ಸೇವೆಗಳು” ಎಂದು ಘೋಷಿಸಿತ್ತು. ಈ ಅವಧಿಯಲ್ಲಿ ಇಂತಹ ಸೇವಾ ಸಂಸ್ಥೆಗಳು ಮುಷ್ಕರ ನಡೆಸಲು ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಪ್ರಾಥಮಿಕ ವಾದಗಳನ್ನು ಆಲಿಸಿದ ಬಳಿಕ, ನ್ಯಾಯಾಲಯ ಮುಷ್ಕರಕ್ಕೆ ತಾತ್ಕಾಲಿಕ ತಡೆ ನೀಡಿದ್ದು, ಸಾರಿಗೆ ಸಂಘಗಳೊಂದಿಗೆ ಮಾತುಕತೆ ನಡೆಸಲು ದಿನಾಂಕ ನಿಗದಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ವಾದ ಮಂಡಿಸಿದರು. ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆಯ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ತಾರನಾಥ ಪೂಜಾರಿ ಹಾಜರಿದ್ದರು. ಕೆಎಸ್ ಆರ್ ಟಿಸಿ, ಬಿಎಂಟಿಸಿ, ಎನ್ ಡಬ್ಲ್ಯುಕೆಆರ್ ಟಿಸಿ ಮತ್ತು ಕೆಕೆಆರ್ ಟಿಸಿ ಪರ ವಕೀಲ ಹೆಚ್ ಆರ್ ರೇಣುಕ ಹಾಜರಿದ್ದರು.

ಕೆಎಸ್ ಆರ್ ಟಿಸಿ ನೌಕರರ ಟ್ರೇಡ್ ಯೂನಿಯನ್ ಜಂಟಿ ಕ್ರಿಯಾ ಸಮಿತಿಯ ಪರ ವಕೀಲರಾದ ಲಿಪ್ಟಾನ್ ರೊಸರಿಯೊ ಮತ್ತು ಕ್ಲಿಫ್ಟಾನ್ ರೊಸಾರಿಯೊ ವಾದ ಮಂಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೆ ಗ್ರಾಹಕರಿಗೆ ಶಾಕ್: ಪೆಟ್ರೋಲ್, ಡೀಸೆಲ್ ದರ 5 ದಿನಗಳಲ್ಲಿ ಎರಡನೇ ಬಾರಿ ಏರಿಕೆ

Tamil Nadu: ಯಾವುದೇ ಸಮಯದಲ್ಲಿ TMK ಸರ್ಕಾರ ಪತನ, ರೆಡಿಯಾಗಿರಿ, ಡಿಎಂಕೆ ಕಾರ್ಯಕರ್ತರಿಗೆ ಸ್ಟಾಲಿನ್ ಕರೆ!

ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟ: ಕಂಜನ್ ದಾಳಿಯಿಂದ ಗಾಯಗೊಂಡಿದ್ದ 'ಮಾರ್ತಾಂಡ' ಸಾವು!

ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಧನ ಸಮಾವೇಶ: ಗಿನ್ನೆಸ್ ದಾಖಲೆಗೆ ತುಮಕೂರು ಸಜ್ಜು!

ಗಲ್ಫ್ ರಾಷ್ಟ್ರಗಳ ಮನವಿ: ಇರಾನ್ ಮೇಲಿನ ದಾಳಿ ಮುಂದೂಡಿದ ಡೊನಾಲ್ಡ್ ಟ್ರಂಪ್

SCROLL FOR NEXT