ಗದಗ: ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿ ಒಂದು ಕಾಲು ಹಾಗೂ ಎರಡೂ ಕೈಗಳನ್ನು ಕಳೆದುಕೊಂಡ ಯೋಧನೊಬ್ಬ ಇದೀಗ ರಾಜ್ಯ ಸರ್ಕಾರದಿಂದ ಒಂದು ನಿವೇಶನಕ್ಕಾಗಿ ವರ್ಷಗಳಿಂದ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಹಲವು ಬಾರಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರಿಗೆ ಮನವಿ ಸಲ್ಲಿಸಿದ್ದರೂ, ಇದುವರೆಗೆ ಸರ್ಕಾರದಿಂದ ಸ್ಪಷ್ಟ ನೆರವು ದೊರೆತಿಲ್ಲ ಎಂಬ ಬೇಸರವನ್ನು ನಿವೃತ್ತ ಯೋಧ ರಂಗಪ್ಪ ಆಲೂರ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬಾದಾಮಿ ಸಮೀಪದ ಹುಲಸಗೇರಿ ಗ್ರಾಮದ ನಿವಾಸಿಯಾಗಿರುವ ರಂಗಪ್ಪ ಆಲೂರ, ಕಾರ್ಗಿಲ್ ಯುದ್ಧದ ವೇಳೆ ಪಾಕಿಸ್ತಾನದ ಬಾಂಬ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.
ದಾಳಿಯಲ್ಲಿ ಅವರು ಒಂದು ಕಾಲು ಮತ್ತು ಎರಡೂ ಕೈಗಳನ್ನು ಕಳೆದುಕೊಂಡಿದ್ದಾರೆ. ಸ್ಫೋಟದ ಬಳಿಕ ಸುಮಾರು 50 ಗಂಟೆಗಳ ಕಾಲ ಕೋಮಾದಲ್ಲಿದ್ದ ಅವರು, ಬದುಕುಳಿಯಲು ಸತತ 28 ಶಸ್ತ್ರಚಿಕಿತ್ಸೆಗೊಳಗಾಗಬೇಕಾಯಿತು.
ಇಂದು ರಂಗಪ್ಪ ಅವರು ಕೃತಕ ಸಹಾಯ ಹಾಗೂ ಕೋಲಿನ ನೆರವಿನಿಂದ ನಡೆಯುತ್ತಿದ್ದಾರೆ. ಕೈಗಳು ಕಡಿತಗೊಂಡಿರುವ ಕಾರಣ ಕೋಲನ್ನು ಹಿಡಿಯುವುದಕ್ಕೂ ಕಷ್ಟಪಡುವ ಪರಿಸ್ಥಿತಿಯಲ್ಲಿದ್ದರೂ, ಅವರು ದೇಶಭಕ್ತಿಯ ಮನೋಭಾವವನ್ನು ಕಳೆದುಕೊಂಡಿಲ್ಲ.
ಸರ್ಕಾರದಿಂದ ನಿರೀಕ್ಷಿತ ಸ್ಪಂದನೆ ಸಿಗದಿದ್ದರೂ, ರಂಗಪ್ಪ ಆಲೂರ ಯುವಕರಲ್ಲಿ ಸೇನಾ ಸೇವೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮುಂದುವರಿಸಿದ್ದಾರೆ. ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ ಹಲವು ಗ್ರಾಮಗಳಿಗೆ ತೆರಳಿ ಯುವಕರನ್ನು ಸೇನೆ ಸೇರುವಂತೆ ಪ್ರೇರೇಪಿಸುತ್ತಿದ್ದಾರೆ.
ರಂಗಪ್ಪ ಅವರ ಸ್ನೇಹಿತ ನಾಗಪ್ಪ ಸಿದ್ದಣ್ಣವರ ಮಾತನಾಡಿ, “ರಂಗಪ್ಪ ಅನೇಕ ಗ್ರಾಮಗಳಿಗೆ ತೆರಳಿ ಯುವಕರಿಗೆ ಸೇನೆ ಸೇರುವ ಪ್ರೇರಣೆ ನೀಡುತ್ತಾರೆ. ಅವರಿಗೆ ಒಂದು ನಿವೇಶನದ ಅವಶ್ಯಕತೆ ಇದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಹಲವಾರು ಸಚಿವರಿಗೆ ಮನವಿ ಪತ್ರ ನೀಡಿದ್ದಾರೆ. ಆದರೆ, ಇದುವರೆಗೆ ಯಾವುದೇ ಕ್ರಮವಾಗಿಲ್ಲ. ಇತ್ತೀಚೆಗೆ ನಾವು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ಅವರು ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಕೆ.ಪಾಟೀಲ್ ಅವರು, ರಂಗಪ್ಪ ವಿಶೇಷ ವ್ಯಕ್ತಿ. ಅರ್ಜಿ ನೀಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ದೇಶಕ್ಕಾಗಿ ದೇಹದ ಬಹುಭಾಗ ಕಳೆದುಕೊಂಡ ಯೋಧನೊಬ್ಬ ಇನ್ನೂ ಮೂಲಭೂತ ಅಗತ್ಯಕ್ಕಾಗಿ ಸರ್ಕಾರಿ ಕಚೇರಿಗಳ ಸುತ್ತಾಟ ನಡೆಸುತ್ತಿರುವುದು ಜನರಲ್ಲಿ ಆಕ್ರೋಶಕ್ಕೂ, ಬೇಸರಕ್ಕೂ ಕಾರಣವಾಗಿದೆ.