ಚಂಬಾ: ಹಿಮಾಚಲ ಪ್ರದೇಶದಲ್ಲಿ ಭಾನುವಾರ ಭಯಾನಕ ಅಪಘಾತ ಸಂಭವಿಸಿದ್ದು, ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಟ್ಯಾಕ್ಸಿಯೊಂದು ಚಂಬಾ ಜಿಲ್ಲೆಯ ಪಂಗಿ ಪ್ರದೇಶದ ಬೈರಾಗಢ-ಪಂಗಿ-ಸಚ್ ಪಾಸ್ ರಸ್ತೆಯ ಕಲಾವನ್ ಬಳಿ 500 ಮೀಟರ್ ಆಳದ ಪ್ರಪಾತಕ್ಕೆ ಬಿದ್ದಿದ್ದು, ಭೀಕರ ಅಪಘಾತದಲ್ಲಿ ಚಾಲಕ ಸೇರಿದಂತೆ ಅದರಲ್ಲಿದ್ದ ಎಂಟು ಜನ ಮೃತಪಟ್ಟಿದ್ದಾರೆ.
ಬೆಂಗಳೂರಿನ ಒಂದು ಕುಟುಂಬ ಮತ್ತು ಛತ್ತೀಸ್ಗಢದ ಇನ್ನೊಂದು ಕುಟುಂಬ ಹಾಗೂ ಸ್ಥಳೀಯ ಚಾಲಕ ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿಯವರೆಗೆ ಮೂರು ಶವಗಳನ್ನು ಹೊರತೆಗೆಯಲಾಗಿದೆ ಮತ್ತು ಅಪಘಾತದ ಸಮಯದಲ್ಲಿ ಒಟ್ಟು ಎಂಟು ಜನ ವಾಹನದಲ್ಲಿದ್ದರು ಎಂದು ಚಂಬಾ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ವಿಜಯ್ ಸಕ್ಲಾನಿ ಅವರು ತಿಳಿಸಿದ್ದಾರೆ.
"ಮೂರು ಶವಗಳನ್ನು ಹೊರತೆಗೆಯಲಾಗಿದೆ. ಟ್ಯಾಕ್ಸಿಯಲ್ಲಿ ಎರಡು ಕುಟುಂಬಗಳ ಒಟ್ಟು ಎಂಟು ಜನರಿದ್ದರು. ಅದರಲ್ಲಿ ಒಂದು ಕುಟುಂಬ ಬೆಂಗಳೂರಿನದ್ದು ಮತ್ತು ಇನ್ನೊಂದು ಕುಟುಂಬ ಛತ್ತೀಸ್ಗಢದವರು ಹಾಗೂ ಸ್ಥಳೀಯ ಚಾಲಕ" ಎಂದು ಎಸ್ಪಿ ಸಕ್ಲಾನಿ ಅವರು ಹೇಳಿದ್ದಾರೆ.
ವಾಹನವು ಚಾಲಕನ ನಿಯಂತ್ರ ತಪ್ಪಿ ಆಳವಾದ ಪ್ರಪಾತಕ್ಕೆ ಬಿದ್ದ ಪರಿಣಾಮ ಎಲ್ಲಾ ಎಂಟು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೆಚ್ಚುವರಿ ಉಪ ಆಯುಕ್ತ ಅಮಿತ್ ಮೆಹ್ರಾ ಅವರು ದೃಢಪಡಿಸಿದ್ದಾರೆ.