ಉತ್ತರ ಕನ್ನಡ: ಭಟ್ಕಳ ತಾಲ್ಲೂಕಿನ ಪಡುಶಿರಾಲಿಯಲ್ಲಿ ಚಿಪ್ಪಿಕಲ್ಲು ಸಂಗ್ರಹಿಸುವ ವೇಳೆ ಸಂಭವಿಸಿದ ದುರಂತದಲ್ಲಿ ಮೃತಪಟ್ಟ 11 ಮಂದಿಯ ಕುಟುಂಬಗಳಿಗೆ ತಲಾ ರೂ.16.5 ಲಕ್ಷ ಪರಿಹಾರ ವಿತರಿಸಲಾಗಿದೆ.
ರಾಜ್ಯ ಸರ್ಕಾರ ಈಗಾಗಲೇ ಮೃತರ ಕುಟುಂಬಗಳಿಗೆ ತಲಾ ರೂ.5 ಲಕ್ಷ ಪರಿಹಾರ ಘೋಷಿಸಿತ್ತು. ಮಾಜಿ ಸಚಿವ ಮಂಕಾಳ ವೈದ್ಯ ಅವರು ಮೃತರ ಕುಟುಂಬಗಳನ್ನು ಭೇಟಿ ಮಾಡಿ ಪರಿಹಾರದ ಚೆಕ್ಗಳನ್ನು ವಿತರಿಸಿದರು.
ಒಟ್ಟು ಪರಿಹಾರ ಮೊತ್ತದಲ್ಲಿ ರಾಜ್ಯ ಸರ್ಕಾರದಿಂದ ತಲಾ ರೂ.5 ಲಕ್ಷ, ಮೀನುಗಾರಿಕಾ ಇಲಾಖೆಯಿಂದ ತಲಾ ರೂ.10 ಲಕ್ಷ, ಭಟ್ಕಳದ ಜನತಾ ಸಹಕಾರಿ ಸಂಘದಿಂದ ತಲಾ ರೂ.50 ಸಾವಿರ ಹಾಗೂ ಮಂಕಾಳ ವೈದ್ಯ ಅವರ ವೈಯಕ್ತಿಕ ಪರಿಹಾರ ರೂಪದಲ್ಲಿ ತಲಾ ರೂ.1 ಲಕ್ಷ ನೀಡಲಾಗಿದೆ. ಈ ಮೂಲಕ ಪ್ರತಿಯೊಂದು ಕುಟುಂಬಕ್ಕೂ ಒಟ್ಟು ರೂ.16.5 ಲಕ್ಷ ಪರಿಹಾರ ದೊರೆತಂತಾಗಿದೆ.
ದುರಂತದಲ್ಲಿ ಕುಟುಂಬದ ಆಧಾರಸ್ತಂಭರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ, ಮೃತರ ಮಕ್ಕಳ ಶಿಕ್ಷಣದ ಸಂಪೂರ್ಣ ಹೊಣೆಯನ್ನು ತಾವು ವಹಿಸಿಕೊಳ್ಳುವುದಾಗಿ ಮಂಕಾಳ ವೈದ್ಯ ಘೋಷಿಸಿದ್ದಾರೆ. ಅಲ್ಲದೆ, ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ಜಿಲ್ಲೆಯ ಸಹಕಾರಿ ಬ್ಯಾಂಕ್ಗಳಲ್ಲಿ ಉದ್ಯೋಗ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ದುರಂತ ಸಂಭವಿಸಿದ್ದು ಹೇಗೆ?
ಘಟನೆಯ ಕುರಿತು ವಿವರಿಸಿದ ಮಂಕಾಳ ವೈದ್ಯ, ಮೃತರು ಕಳೆದ ಹತ್ತು ವರ್ಷಗಳಿಂದ ಚಿಪ್ಪಿಕಲ್ಲು (ಕ್ಲಾಮ್) ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು.
ಚಿಪ್ಪು ಸಂಗ್ರಹಿಸುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಬಂಡೆಗಳ ಮೇಲೂ ಹಾಗೂ ಕೆಳಭಾಗದಲ್ಲೂ ಹೆಚ್ಚಿನ ಪ್ರಮಾಣದ ಚಿಪ್ಪುಗಳು ಕಂಡುಬಂದಿದ್ದವು. ಈ ವೇಳೆ ಇಬ್ಬರು ಆಳವಾದ ನೀರಿಗೆ ಇಳಿದು ಮುಳುಗಿದ್ದಾರೆ. ಅವರನ್ನು ರಕ್ಷಿಸಲು ತೆರಳಿದ ಇತರರು ಕೂಡ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆಂದು ಹೇಳಿದ್ದಾರೆ.
ಈ ದುರ್ಘಟನೆ ಬಳಿಕ, ವರ್ಷಗಳಿಂದ ಇದೇ ಕೆಲಸ ಮಾಡುತ್ತಿದ್ದ ಅನುಭವಿ ಕಾರ್ಮಿಕರು ಹೇಗೆ ಮುಳುಗಿದರು ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿದ್ದವು. ಆದರೆ, ರಕ್ಷಣೆಗೆ ಮುಂದಾದಾಗ ಸರಣಿ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮೃತರ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಭರವಸೆಯನ್ನೂ ನೀಡಿರುವ ಮಂಕಾಳ ವೈದ್ಯ, ಸಮಾಜ ಸೇವಾ ಸಂಸ್ಥೆಗಳು ಹಾಗೂ ದಾನಿಗಳು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.