ಕೊಡಗು: ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ತಲಕಾವೇರಿ ಸಮೀಪದ ಕೆಂಪರಾಜಮೊಟ್ಟೆ ಕಾಲೋನಿಯಲ್ಲಿ ಅಮ್ಮ-ಮಗಳ ಜಗಳ ಇಬ್ಬರ ಸಾವಿನಲ್ಲಿ ಅಂತ್ಯವಾಗಿರುವ ದಾರುಣ ಘಟನೆ ನಡೆದಿದೆ.
ಮೃತರನ್ನು 45 ವರ್ಷದ ಪ್ರೇಮಾ ಹಾಗೂ ಅವರ 14 ವರ್ಷದ ಮಗಳು ಪ್ರಿಯಾಂಕಾ ಎಂದು ಗುರುತಿಸಲಾಗಿದೆ. ಮಗಳು ಮನೆಗೆ ತಡವಾಗಿ ಬಂದಿದ್ದಕ್ಕೆ ತಾಯಿ ಗದರಿಸಿದ್ದೇ ಇಬ್ಬರ ಪ್ರಾಣಕ್ಕೆ ಕಂಟಕವಾಗಿದೆ.
ಕರಿಕೆಯಲ್ಲಿರುವ ಆಶ್ರಮ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಪ್ರಿಯಾಂಕಾ ಶನಿವಾರ ಶಾಲೆಯಿಂದ ಊರಿಗೆ ಬಂದವಳು ಮನೆಗೆ ತಡವಾಗಿ ಬಂದಿದ್ದಳು. ಈ ವಿಚಾರಕ್ಕೆ ತಾಯಿ ಪ್ರೇಮ ಮಗಳನ್ನು ಪ್ರಶ್ನಿಸಿ ಗದರಿಸಿದ್ದರು. ಇದರಿಂದ ಮನನೊಂದ ಪ್ರಿಯಾಂಕಾ, ಮನೆಯ ಪಕ್ಕದಲ್ಲೇ ಇರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಓಡಿದ್ದಾಳೆ.
ಮಗಳನ್ನು ತಡೆಯಲು ತಾಯಿ ಪ್ರೇಮ ಕೂಡ ಆಕೆಯ ಹಿಂದೆ ಓಡಿದ್ದಾರೆ. ಆದರೆ ಅವರು ಕೆರೆಯ ಹತ್ತಿರ ತಲುಪುವಷ್ಟರಲ್ಲೇ ಪ್ರಿಯಾಂಕಾ ಕೆರೆಗೆ ಹಾರಿದ್ದಾಳೆ. ಮಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕೆಂದು ಈಜಲು ಬಾರದಿದ್ದರೂ ತಾಯಿ ಪ್ರೇಮ ಕೂಡ ಕೆರೆಗೆ ಹಾರಿದ್ದಾರೆ. ಕೆರೆ ಸುಮಾರು 15 ರಿಂದ 20 ಅಡಿ ಆಳವಿದ್ದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸ್ಥಳೀಯರು ರಕ್ಷಿಸಲು ಪ್ರಯತ್ನಿಸಿದರೂ ಆಳದ ಕಾರಣ ಸಾಧ್ಯವಾಗಲಿಲ್ಲ. ಸೋಮವಾರ ಕತ್ತಲೆಯಾದ ಕಾರಣ ಕಾರ್ಯಾಚರಣೆ ವಿಳಂಬವಾಗಿತ್ತು. ಮಂಗಳವಾರ ಬೆಳಗ್ಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಭಾಗಮಂಡಲ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.