ಸ್ಯಾಂಡಲ್ವುಡ್ನ ಕರಿಚಿರತೆ ಎಂದೇ ಗುರುತಿಸಿಕೊಂಡಿರುವ ಖ್ಯಾತ ನಟ ‘ದುನಿಯಾ’ ವಿಜಯ್ ಹಾಗೂ ಅವರ ಪತ್ನಿ ನಾಗರತ್ನ ಅವರ ದಾಂಪತ್ಯ ಜೀವನಕ್ಕೆ ಕೊನೆಗೂ ತೆರೆಬಿದ್ದಿದೆ. ಹಲವು ವರ್ಷಗಳಿಂದ ಕಾನೂನು ಸಮರ ನಡೆಸುತ್ತಿದ್ದ ಈ ಜೋಡಿಯ ವಿಚ್ಛೇದನ ಕೇಸನ್ನು ಹೈಕೋರ್ಟ್ ವಿಭಾಗೀಯ ಪೀಠ ಕ್ರೌರ್ಯದ ಆಧಾರದ ಮೇಲೆ ಮಂಜೂರು ಮಾಡಿ ಇಂದು ಮಹತ್ವದ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಹೆಚ್. ಶಾಂತಿಭೂಷಣ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಪ್ರಕರಣದ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡಿದೆ. ವಿಚ್ಛೇದನ ಮಂಜೂರು ಮಾಡುವ ಜೊತೆಗೆ, ನಾಗರತ್ನ ಅವರಿಗೆ ವಿಜಯ್ ಅವರ ಆರ್ಥಿಕ ಸ್ಥಿತಿಗತಿ ಆಧರಿಸಿ 2 ಕೋಟಿ ರೂಪಾಯಿಗಳ ಜೀವನಾಂಶ ಪಾವತಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ವಿಚ್ಛೇದನದ ವೇಳೆ ನಾಗರತ್ನ ಮತ್ತು ಮೂವರು ಮಕ್ಕಳ ಭವಿಷ್ಯ ಹಾಗೂ ಜೀವನ ನಿರ್ವಹಣೆಯ ಪ್ರಮುಖ ಅಂಶವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ದುನಿಯಾ ವಿಜಯ್ ಅವರ ಪ್ರಸ್ತುತ ಸಾಮಾಜಿಕ ಸ್ಥಾನಮಾನ, ವೃತ್ತಿಪರ ಗಳಿಕೆ ಹಾಗೂ ಹಣಕಾಸಿನ ಸ್ಥಿತಿಗತಿಗಳನ್ನು ಕೂಲಂಕುಷವಾಗಿ ಪರಾಮರ್ಶಿಸಿ 2 ಕೋಟಿ ಜೀವನಾಂಶದ ಮೊತ್ತವನ್ನು ನಿಗದಿಪಡಿಸಲಾಗಿದೆ ಎಂದು ಪೀಠ ತಿಳಿಸಿದೆ.
ನಾಗರತ್ನ ಜೊತೆ ದುನಿಯಾ ವಿಜಯ್ 1999ರಲ್ಲಿ ಮದುವೆ ಆಗಿ ಹಲವು ವರ್ಷಗಳ ಕಾಲ ಸಂಸಾರ ನಡೆಸಿದ್ದರೂ ನಂತರ ವೈಮನಸ್ಸು ಉಂಟಾಗಿ ತಾರಕಕ್ಕೇರಿತ್ತು. ಹಲವು ಬಾರಿ ಮಾಧ್ಯಮಗಳಲ್ಲಿ ಕೂಡ ಸುದ್ದಿಯಾಗಿತ್ತು. ದುನಿಯಾ ವಿಜಯ್ 2013ರಲ್ಲಿ ಡಿವೋರ್ಸ್ ಅರ್ಜಿ ಸಲ್ಲಿಕೆ ಮಾಡಿದ್ದರು. ಹಲವು ವರ್ಷಗಳ ಕಾನೂನು ಸಮರ ಈಗ ಕೊನೆ ಆಗಿದೆ.