ಬೆಂಗಳೂರು: ಕರ್ನಾಟಕ ಸರ್ಕಾರದ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ಮಸೂದೆ, 2026ಕ್ಕೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಮಸೂದೆಗೆ ಸಂಬಂಧಿಸಿದಂತೆ ಸ್ಪಷ್ಟನೆ ಕೋರಿ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಪಾಲರ ಒಪ್ಪಿಗೆಗಾಗಿ ಲೋಕಭವನಕ್ಕೆ ಕಳುಹಿಸಲಾಗಿದ್ದ ಮಸೂದೆ ಕುರಿತು ರಾಜ್ಯಪಾಲರು ಕಳವಳ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಜನರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಗುರುವಾರ ಮಸೂದೆಯನ್ನು ಹಿಂಪಡೆಯಲು ನಿರ್ಧರಿಸಿತ್ತು. ಜನರ ಆಕ್ಷೇಪಗಳನ್ನು ಪರಿಗಣಿಸಿ ಮಸೂದೆಯನ್ನು ಪರಿಷ್ಕರಿಸಿ ಮತ್ತೆ ಮಂಡಿಸಲು ಸರ್ಕಾರ ಮುಂದಾಗಿದೆ.
ಇದೀಗ ಶುಕ್ರವಾರ ಲೋಕಭವನವು ಮಸೂದೆಯನ್ನು ಸರ್ಕಾರಕ್ಕೆ ಹಿಂದಿರುಗಿಸಿ, ಕೆಲವು ವಿಚಾರಗಳ ಕುರಿತು ಸ್ಪಷ್ಟನೆ ಕೇಳಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರಕ್ಕೆ ಕಳುಹಿಸಿರುವ ಸಂವಹನದಲ್ಲಿ, ಮಸೂದೆಯ ಪ್ರಸ್ತುತ ರೂಪವು ಪರಿಸರದ ದೃಷ್ಟಿಯಿಂದ ಮಹತ್ವದ ಸಾರ್ವಜನಿಕ ಆಸ್ತಿಗಳನ್ನು ಸಮುದಾಯದ ಹಿತಕ್ಕಾಗಿ ಸಂರಕ್ಷಿಸಬೇಕೆಂಬ ಮೂಲ ತತ್ವದಿಂದ ಆತಂಕಕಾರಿ ರೀತಿಯಲ್ಲಿ ದೂರ ಸರಿದಿದೆ ಎಂದು ಲೋಕಭವನ ಅಭಿಪ್ರಾಯಪಟ್ಟಿದೆ.
ರಾಜ್ಯದ ಹಸಿರು ಪ್ರದೇಶಗಳ ಸಂರಕ್ಷಕ ಸರ್ಕಾರವೇ ಆಗಿದ್ದು, ಇಂತಹ ಪ್ರದೇಶಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದೆ. ಸಂರಕ್ಷಕತ್ವವನ್ನು ಸಾರ್ವಜನಿಕ ಆಸ್ತಿಯನ್ನು ಪರಭಾರೆ ಮಾಡಲು ನೀಡುವ ಅನುಮತಿಯಾಗಿ ಪರಿವರ್ತಿಸಲು ಸಾಧ್ಯವಿಲ್ಲ.
ಅಭಿವೃದ್ಧಿ ಎಂದರೆ ಸರ್ಕಾರದ ನಿಯಂತ್ರಣದಲ್ಲಿವೆ ಎಂಬ ಕಾರಣಕ್ಕೆ ಮರುಪಡೆಯಲು ಸಾಧ್ಯವಾಗದ ಸಾರ್ವಜನಿಕ ಆಸ್ತಿಗಳನ್ನು ಹಂತಹಂತವಾಗಿ ಬಿಟ್ಟುಕೊಡುವುದಲ್ಲ. ಇಂತಹ ಅಮೂಲ್ಯ ಸಾರ್ವಜನಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಲೋಕಭವನ ಸ್ಪಷ್ಟಪಡಿಸಿದೆ ಎಂದು ತಿಳಿದುಬಂದಿದೆ.