ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಸಹ ಆರೋಪಿ ಪ್ರತಾಪ್ ರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗೆ ಅಕ್ರಮವಾಗಿ ಮೊಬೈಲ್ ಫೋನ್ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನ್ಯಾಯಾಲಯ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಪ್ರಜ್ವಲ್ ಅವರನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಸಂಪೂರ್ಣವಾಗಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ತನಿಖೆಯನ್ನು ತೀವ್ರಗೊಳಿಸುವ ಹಾಗೂ ಮೊಬೈಲ್ ಫೋನ್ ಪ್ರಜ್ವಲ್ ಅವರ ಕೈಗೆ ಹೇಗೆ ತಲುಪಿತು, ಅದನ್ನು ಅವರಿಗೆ ಯಾರು ನೀಡಿದರು ಮತ್ತು ಜೈಲಿನೊಳಗೆ ಅದನ್ನು ಹೇಗೆ ಬಳಸಲಾಗುತ್ತಿತ್ತು ಎಂಬುದನ್ನು ಪತ್ತೆಹಚ್ಚುವ ಸಲುವಾಗಿ ಇಬ್ಬರು ಆರೋಪಿಗಳನ್ನೂ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಈ ಮನವಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.
ಆಗಸ್ಟ್ 11ರಂದು ಕೇಂದ್ರ ಅಪರಾಧ ವಿಭಾಗದ (CCB) ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಪ್ರಜ್ವಲ್ ಅವರಿಂದ ನೀಲಿ ಬಣ್ಣದ ಸ್ಮಾರ್ಟ್ಫೋನ್ವೊಂದನ್ನು ವಶಪಡಿಸಿಕೊಳ್ಳಲಾಗಿತ್ತು.
ಫೋನ್ನಲ್ಲಿ ಫೇಸ್ಬುಕ್, ವಾಟ್ಸ್ಆ್ಯಪ್ ಸೇರಿದಂತೆ ಹಲವು ಆ್ಯಪ್ಗಳು ಇನ್ಸ್ಟಾಲ್ ಆಗಿರುವುದು ಪೊಲೀಸರ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಬಳಿಕ ಮೊಬೈಲ್ ಫೋನ್ ನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಪರೀಕ್ಷೆಗಾಗಿ ಕಳುಹಿಸಲಾಗಿತ್ತು.
ತನಿಖೆಯ ವೇಳೆ, ಈ ಮೊಬೈಲ್ ಫೋನ್ ಮೂಲಕ ಪ್ರಜ್ವಲ್ ಅವರು ತಮ್ಮ ಕುಟುಂಬ ಸದಸ್ಯರು ಮತ್ತು ವಕೀಲರೊಂದಿಗೆ ಸಂವಹನ ನಡೆಸುತ್ತಿದ್ದರು ಎನ್ನಲಾಗಿದೆ. ಸಿಮ್ ಕಾರ್ಡ್ ನ್ನು ಆಂಧ್ರಪ್ರದೇಶದಿಂದ ಪಡೆಯಲಾಗಿತ್ತು ಎಂದು ವರದಿಯಾಗಿದೆ.
ಪರಪ್ಪನ ಅಗ್ರಹಾರ ಜೈಲಿನೊಳಗೆ ಅಕ್ರಮವಾಗಿ ಮೊಬೈಲ್ ಫೋನ್ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿರುವ ಎಫ್ಐಆರ್ನಲ್ಲಿ ಪ್ರತಾಪ್ ಅವರನ್ನು ಮೊದಲ ಆರೋಪಿ (A1) ಎಂದು, ಪ್ರಜ್ವಲ್ ರೇವಣ್ಣ ಅವರನ್ನು ಎರಡನೇ ಆರೋಪಿ (A2) ಎಂದು ಹೆಸರಿಸಲಾಗಿದೆ.
ಮೊಬೈಲ್ ಫೋನ್ ಜೈಲಿನೊಳಗೆ ಹೇಗೆ ಬಂದಿತು, ಪ್ರಜ್ವಲ್ ಅವರಿಗೆ ಅದನ್ನು ಬಳಸಲು ಬೇರೆಯವರು ಸಹಾಯ ಮಾಡಿದ್ದರೇ ಮತ್ತು ಜೈಲಿನ ಹೊರಗಿರುವ ವ್ಯಕ್ತಿಗಳೊಂದಿಗೆ ಸಂವಹನ ನಡೆಸಲು ಅವರು ಮೊಬೈಲ್ ಬಳಸಿದ್ದರೇ ಎಂಬುದನ್ನು ತಿಳಿದುಕೊಳ್ಳಲು ತನಿಖಾ ತಂಡ ಇಬ್ಬರು ಆರೋಪಿಗಳನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಲಿದೆ.