ಮಂಡ್ಯ: ಮಂಡ್ಯ ಜಿಲ್ಲಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಕರ್ನಾಟಕ ಸರ್ಕಾರವು ರಾತ್ರಿ ವೇಳೆ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾವೇರಿ ನೀರನ್ನು ರಹಸ್ಯವಾಗಿ ಹರಿಸಿ ರೈತರ ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗುವುದನ್ನು ರಕ್ಷಿಸಿದ ಘಟನೆ ಕಳೆದ ರಾತ್ರಿ ನಡೆದಿದೆ.
ಕರ್ನಾಟಕವು ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 6,000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಹೊರಡಿಸಿರುವ ಹೊಸ ನಿರ್ದೇಶನವೇ ಈ ಜನಾಕ್ರೋಶಕ್ಕೆ ನೇರ ಕಾರಣವಾಗಿದೆ.
ರಹಸ್ಯವಾಗಿ ರಾತ್ರಿ ವೇಳೆ ನೀರು ಬಿಡುಗಡೆ: ಸ್ಥಳೀಯ ರೈತರು ಹಾಗೂ ಪ್ರತಿಪಕ್ಷದ ನಾಯಕರು, ನೀರು ಬಿಡುಗಡೆ ಪ್ರಮಾಣವನ್ನು ಪೂರೈಸಲು ಸರ್ಕಾರ ಮಧ್ಯರಾತ್ರಿಯಲ್ಲಿ ಅಣೆಕಟ್ಟಿನ ಗೇಟ್ಗಳನ್ನು ತೆರೆದು, ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗುವುದನ್ನು ತಪ್ಪಿಸಲು ರಹಸ್ಯವಾಗಿ ನೀರು ಹರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕಂಗಾಲಾದ ರೈತರು
ಈ ಭಾಗದ ಕೆರೆಗಳು ಬತ್ತುತ್ತಿದ್ದು, ತಮ್ಮ ಬೆಳೆಗಳಿಗೆ ಹಾಗೂ ಕುಡಿಯುವ ಮೂಲಭೂತ ಅಗತ್ಯಗಳಿಗೂ ನೀರಿನ ಕೊರತೆ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಳಹರಿವಿನ ಪ್ರದೇಶಗಳಿಗೆ ಯಾವುದೇ ಪ್ರಮಾಣದ ನೀರು ಬಿಡುಗಡೆ ಮಾಡುವುದು ಒಪ್ಪಲಾಗದು ಎಂದು ಪ್ರತಿಭಟನಾಕಾರರು ಹೇಳುತ್ತಾರೆ.
ಸರ್ಕಾರದ ನಿಲುವು
ರಾಜ್ಯ ಜಲಸಂಪನ್ಮೂಲ ಸಚಿವ ಎನ್. ಚೆಲುವರಾಯಸ್ವಾಮಿ ಹಾಗೂ ಸ್ಥಳೀಯ ಶಾಸಕರು, ರಾಜ್ಯವು ತೀವ್ರ ಜಲಕ್ಷಾಮದ ಪರಿಸ್ಥಿತಿ ಎದುರಿಸುತ್ತಿದ್ದು, ಈ ಪ್ರಮಾಣದ ನೀರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ.
ಜಾನುವಾರುಗಳ ರಕ್ಷಣೆ
ತಮಿಳು ನಾಡಿಗೆ ಕೆಆರ್ ಎಸ್ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ ಮಾಡಿ ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿ ಅವುಗಳನ್ನು ನಾವು ರಕ್ಷಿಸಿ ದಡಕ್ಕೆ ಕರೆತಂದೆವು ಎಂದು ರೈತರು ಹೇಳುತ್ತಾರೆ. ಏಕಾಏಕಿ ಈ ರೀತಿ ನೀರು ಬಿಡುತ್ತಾರೆ ಎಂದು ನಮಗೆ ಗೊತ್ತಿರಲಿಲ್ಲ, ಎಂದಿನಂತೆ ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿದೆ ಎಂದು ನಾವು ಜಾನುವಾರುಗಳನ್ನು ಬಿಟ್ಟೆವು, ಏಕಾಏಕಿ ನೀರು ಹರಿದು ಬಂದಿದ್ದರಿಂದ ಜಾನುವಾರುಗಳಿಗೆ ತೊಂದರೆಯಾಯಿತು, ನಾವು 6 ಜಾನುವಾರುಗಳನ್ನು ಕಾಪಾಡಿದ್ದೇವೆ ಎಂದರು.
ನಿನ್ನೆ ಸಾಯಂಕಾಲ 6.30 ಸುಮಾರಿಗೆ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದರು. ಹಸು ಮೇಯಿಸಲು ಹೋಗಿದ್ದು ಸುತ್ತ ಏಕಾಏಕಿ ನೀರು ತುಂಬಿಕೊಂಡಿದೆ, ಹೊರಗೆ ಬರಲು ಆಗುತ್ತಿಲ್ಲ ಎಂದು ಕರೆ ಮಾಡಿದರು, ಸ್ಥಳಕ್ಕೆ ಬಂದು ನೋಡಿದಾಗ ಸುತ್ತ ನೀರು ಇತ್ತು, ರಾತ್ರಿ ದೋಣಿ ಮತ್ತು ಅಗ್ನಿಶಾಮಕ ಯಂತ್ರಗಳ ಮೂಲಕ ಕಾರ್ಯಾಚರಣೆ ಮಾಡಿ ಹಸುಗಳು ಮತ್ತು ರೈತರನ್ನು ರಾತ್ರಿ 10.30 ಸುಮಾರಿಗೆ ಅಷ್ಟು ದೀರ್ಘ ಹೊತ್ತು ರಕ್ಷಿಸಿದೆವು, ಆರು ಹಸುಗಳನ್ನು ಕಾಪಾಡಿದೆವು ಎಂದು ಶ್ರೀರಂಗಪಟ್ಟಣದ ಅಗ್ನಿಶಾಮಕ ಸಿಬ್ಬಂದಿ ಅಂಬರೀಷ್ ಹೇಳುತ್ತಾರೆ.