ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ) ನಡೆಸಿದ್ದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣದಲ್ಲಿ ಜೈಲು ಪಾಲಾಗಿರುವ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರು, ಗರ್ಲ್ಫ್ರೆಂಡ್ಗೆ ಗೋಲ್ಡ್ ಹಾಗೂ ಅಣ್ಣನಿಗೆ ವಿಲ್ಲಾ ಗಿಫ್ಟ್ ನೀಡಿರುವ ವಿಚಾರ ಸಿಐಡಿ ತನಿಖೆಯಿಂದ ಬಯಲಾಗಿದೆ.
ಸಿಐಡಿ ತನಿಖೆ ವೇಳೆ, IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರು, ಅಭ್ಯರ್ಥಿಗಳಿಂದ ಕೋಟ್ಯಂತರ ರೂ. ಲಂಚ ಸಂಗ್ರಹಿಸಿ, ಅದರಲ್ಲಿ ತನ್ನ ಅಯೋಧ್ಯೆ ಮೂಲದ ಗರ್ಲ್ಫ್ರೆಂಡ್ಗೆ 26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿಸಿ ಉಡುಗೊರೆ ನೀಡಿದ್ದಾರೆ. ಹೀಗಾಗಿ, ಇದೀಗ ಅವರ ಗೆಳತಿಗೂ ಸಂಕಷ್ಟ ಎದುರಾಗಿದೆ.
ಜ್ಞಾನೇಂದ್ರ ಕುಮಾರ್ ಅವರು, ತಮ್ಮ ಗೆಳತಿಯನ್ನು ಬೆಂಗಳೂರಿಗೆ ಕರೆಸಿಕೊಂಡು, ಡಿಕನ್ಸನ್ ರಸ್ತೆಯ ಪ್ರತಿಷ್ಠಿತ ಜ್ಯುವೆಲರಿ ಶಾಪ್ಗೆ ಕರೆದೊಯ್ದು ಚಿನ್ನಾಭರಣ ಖರೀದಿಸಿ ಉಡುಗೊರೆಯಾಗಿ ನೀಡಿದ್ದಾರೆ.
ಈ ಆಭರಣ ಖರೀದಿಗೆ ಓಂ ಶ್ರೀ ಲಕ್ಷ್ಮೀ ಸೌಹಾರ್ದ ಸೊಸೈಟಿಯ ಬಸವರಾಜು ಬ್ಯಾಂಕ್ ಖಾತೆಯಿಂದ 26 ಲಕ್ಷ ರೂ. ವರ್ಗಾಯಿಸಿ ಬಿಲ್ ಪಾವತಿ ಮಾಡಲಾಗಿದೆ. ಇದು ಅಕ್ರಮದ ಹಣದಲ್ಲಿಯೇ ಆಭರಣ ಖರೀದಿ ಮಾಡಿರುವುದಕ್ಕೆ ಪ್ರಬಲ ಸಾಕ್ಷ್ಯ ಒದಗಿಸಿದೆ. ಜತೆಗೆ, ಜ್ಞಾನೇಂದ್ರ ಕುಮಾರ್ ಹಾಗೂ ಅವರ ಗೆಳತಿ ಇಬ್ಬರೂ ಜ್ಯುವೆಲರಿ ಶಾಪ್ನಲ್ಲಿರುವ ಫೋಟೊ ಕೂಡ ಸಿಕ್ಕಿದೆ. ಅಲ್ಲದೆ ಆಭರಣ ಖರೀದಿಯ ಬಿಲ್ ಸಹ ಜಪ್ತಿ ಮಾಡಲಾಗಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಅಕ್ರಮದ ಹಣದಲ್ಲಿ ಖರೀದಿಸಿದ ಆಭರಣಗಳನ್ನು ಕಾನೂನುರೀತ್ಯ ಜಪ್ತಿ ಮಾಡಬೇಕಿದೆ. ಹೀಗಾಗಿ, ಶುಕ್ರವಾರ ಸಿಐಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಜ್ಞಾನೇಂದ್ರ ಕುಮಾರ್ ಅವರ ಗೆಳತಿಗೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಇನ್ನು 2016ರ ಬ್ಯಾಚ್ನ ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿಯಾಗಿರುವ ಜ್ಞಾನೇಂದ್ರ ಕುಮಾರ್ ಅವರು, 2024ರ ಫೆಬ್ರವರಿಯಿಂದ 2026ರ ಮಾರ್ಚ್ ವರೆಗೆ ಕೆಪಿಎಸ್ ಸಿ ಪರೀಕ್ಷಾ ನಿಯಂತ್ರಕರಾಗಿದ್ದರು. ಈ ಅವಧಿಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಸಮೀಪ ಐಷಾರಾಮಿ ವಿಲ್ಲಾ ಖರೀದಿ ಮಾಡಿದ್ದಾರೆ. ಈ ವಿಲ್ಲಾವು ಜ್ಞಾನೇಂದ್ರ ಕುಮಾರ್ ಅವರ ಅಣ್ಣ ಕಮಲಾಪತಿ ಅವರ ಹೆಸರಿನಲ್ಲಿದೆ. ಈ ಸ್ವತ್ತು ಖರೀದಿಗೆ ಅಕ್ರಮ ಹಣ ಬಳಸಿರುವ ಶಂಕೆಯಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.