ಬೆಂಗಳೂರು: ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದ ಜಾಗದ ವಿಚಾರವಾಗಿ ವಕೀಲ ಪುಟ್ಟಭೈರೇಗೌಡ ಅವರ ಮೇಲೆ 30ರಿಂದ 40 ಮಂದಿ ಗುಂಪು ಕಟ್ಟಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ತಮ್ಮದೇ ಜಾಗದಲ್ಲಿ ಅಭಿವೃದ್ಧಿ ಕೆಲಸಕ್ಕಾಗಿ ನಿರ್ಮಿಸಲಾಗಿದ್ದ ಶೆಡ್ ಪರಿಶೀಲಿಸಲು ಪುಟ್ಟಭೈರೇಗೌಡ ತೆರಳಿದ್ದ ವೇಳೆ ಗುಂಪೊಂದು ಅವರನ್ನು ಸುತ್ತುವರೆದಿದೆ ಎನ್ನಲಾಗಿದೆ. ಈ ವೇಳೆ ಅವರು ಶೆಡ್ನೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಆದರೆ ಶೆಡ್ನ ಬಾಗಿಲು ಒಡೆದು ಅವರನ್ನು ಹೊರಗೆ ಎಳೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಮೈಕೋ ಲೇಔಟ್ ನಿವಾಸಿಯಾಗಿರುವ ಸಂತ್ರಸ್ತ ಎಲ್. ಪುಟ್ಟ ಬೈರೇಗೌಡ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ವೈದ್ಯಕೀಯ-ಕಾನೂನು ಪ್ರಕರಣದ (ಮೆಡಿಕೋ-ಲೀಗಲ್ ಕೇಸ್) ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಅಕ್ಟೋಬರ್ 22, 2025 ರಂದು ನ್ಯಾನಪ್ಪನಹಳ್ಳಿಯಲ್ಲಿ ನಿವೇಶನವೊಂದನ್ನು ಖರೀದಿಸಿದ್ದರು. ಅವರು ಆ ಜಾಗದಲ್ಲಿ ಶೆಡ್ ನಿರ್ಮಿಸಿ, ಕಾಂಪೌಂಡ್ ಗೋಡೆ ಕಟ್ಟಿ, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಹಾಗೂ ವಿದ್ಯುತ್ ಸಂಪರ್ಕವನ್ನು ಪಡೆದಿದ್ದರು. ಘಟನೆಗೆ ಸುಮಾರು ಒಂದು ವಾರದ ಮೊದಲು, ಆ ಜಾಗದ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದನ್ನು ಅವರು ಗಮನಿಸಿದ್ದರು. ಅನಿಲ್ ಕುಮಾರ್ ಎಂಬಾತ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾನೆ ಎಂಬ ವಿಷಯ ನಂತರ ಅವರಿಗೆ ತಿಳಿದುಬಂದಿತ್ತು.
ಗುರುವಾರ, ಕೆಲಸದ ನಿಮಿತ್ತ ಜಯನಗರದ ಬಳಿ ಪ್ರಯಾಣಿಸುತ್ತಿದ್ದಾಗ, ಪುಟ್ಟ ಬೇರೇಗೌಡರು ತಮ್ಮ ಮೊಬೈಲ್ ಫೋನ್ ಮೂಲಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಸಂಪರ್ಕವು ಕಟ್ ಆಗಿರುವುದನ್ನು ಗಮನಿಸಿದರು. ತಕ್ಷಣವೇ ಅವರು ಆ ಜಾಗಕ್ಕೆ ತೆರಳಿ (ಬೆಳಿಗ್ಗೆ 10.30ರ ಸುಮಾರಿಗೆ) ಪರಿಶೀಲಿಸಿದಾಗ, ಸಿಸಿಟಿವಿ ಕ್ಯಾಮೆರಾಗಳು, ವಿದ್ಯುತ್ ಮೀಟರ್ ಮತ್ತು ಪ್ರವೇಶ ದ್ವಾರಗಳಿಗೆ ಹಾನಿಯಾಗಿರುವುದು ಕಂಡುಬಂದಿದೆ. ಅವರು ಅಕ್ಕಪಕ್ಕದವರ ಬಳಿ ವಿಚಾರಿಸುತ್ತಿದ್ದಾಗ, ಆರೋಪಿಗಳು ಅವರ ಜಾಗಕ್ಕೆ ಅತಿಕ್ರಮವಾಗಿ ನುಗ್ಗಿ ಅವರತ್ತ ಧಾವಿಸಿ ಬಂದರು. ದಾಳಿಯ ಭಯದಿಂದ ಅವರು ಶೆಡ್ನೊಳಗೆ ಓಡಿ ಬಾಗಿಲು ಮುಚ್ಚಲು ಪ್ರಯತ್ನಿಸಿದರು.
ಕಬ್ಬಿಣದ ರಾಡ್ ಹಿಡಿದಿದ್ದ ಅನಿಲ್ ಎಂಬಾತ ಶೆಡ್ನೊಳಗೆ ನುಗ್ಗಿ ತಮ್ಮ ಎಡಗಣ್ಣು, ಮೂಗು ಮತ್ತು ಕುತ್ತಿಗೆಗೆ ಗುದ್ದಿದನೆಂದು ಸಂತ್ರಸ್ತರು ಹೇಳಿದ್ದಾರೆ. ಅನಿಲ್ ಜೊತೆಗಿದ್ದ ಕೆಲವರು ಬಲವಂತವಾಗಿ ಶೆಡ್ನ ಬಾಗಿಲು ತೆರೆದು, ಬಾಗಿಲು ಮತ್ತು ಅದರ ಚೌಕಟ್ಟಿಗೆ ಹಾನಿ ಮಾಡಿದ್ದಾರೆ. ಅಲ್ಲದೆ, ಹಲವಾರು ಮಹಿಳೆಯರು ಶೆಡ್ನೊಳಗೆ ನುಗ್ಗಿ, ತಮ್ಮನ್ನು ಬಿಟ್ಟುಬಿಡುವಂತೆ ಮನವಿ ಮಾಡಿದರೂ ಲೆಕ್ಕಿಸದೆ ತಮ್ಮನ್ನು ಹೊರಗೆ ಎಳೆದು ತಂದು ಹಲ್ಲೆ ನಡೆಸಿದರು ಎಂದು ಅವರು ಆರೋಪಿಸಿದ್ದಾರೆ," ಎಂದು ಅಧಿಕಾರಿಯೊಬ್ಬರು ತಿಳಿಸಿದರು. ರಕ್ತಸ್ರಾವವಾಗುತ್ತಿದ್ದ ಗೌಡರನ್ನು ಅವರ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಈ ಸಂಬಂಧ ಹುಳಿಮಾವು ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಕೊಲೆ ಯತ್ನ ಹಾಗೂ ಬಿಎನ್ಎಸ್ (BNS) ನ ಇತರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ," ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.