ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಮೌಲ್ಯಮಾಪನ ವಿಭಾಗದಲ್ಲಿ ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 46 ಬಿಕಾಂ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ನಿಗೂಢವಾಗಿ ನಾಪತ್ತೆಯಾಗಿವೆ. ಈ ಮಹಾ ಯಡವಟ್ಟಿನಿಂದಾಗಿ ಕಳೆದ ಒಂದೂವರೆ ವರ್ಷದಿಂದ (ಏಪ್ರಿಲ್ 2025 ರಿಂದ) ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಒಂದೂವರೆ ವರ್ಷದಿಂದ ಕಾಯುತ್ತಿರುವ ವಿದ್ಯಾರ್ಥಿಗಳು....
ಜನವರಿ 2025 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಬಿಕಾಂ ವಿದ್ಯಾರ್ಥಿಗಳು ಆಧುನಿಕ ಬ್ಯಾಂಕಿಂಗ್ ಎಂಬ ವಿಷಯದ ಪರೀಕ್ಷೆಯನ್ನು ಬರೆದಿದ್ದಾರೆ. ಆದರೆ, ಉಳಿದೆಲ್ಲಾ ವಿದ್ಯಾರ್ಥಿಗಳ ಫಲಿತಾಂಶ ಮಾರ್ಚ್ನಲ್ಲಿ ಪ್ರಕಟವಾಗಿತ್ತು. ಆದರೆ ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಈ 46 ಬಿಕಾಂ ವಿದ್ಯಾರ್ಥಿಗಳು, ಪ್ರಸ್ತುತ 4ನೇ ಸೆಮಿಸ್ಟರ್ ತಲುಪಿದ್ದರೂ ಸಹ, ದ್ವಿತೀಯ ಸೆಮಿಸ್ಟರ್ನ ಫಲಿತಾಂಶ ಮಾತ್ರ ಪ್ರಕಟವಾಗಿರಲಿಲ್ಲ. ಇದರಿಂದ ಕಾಲೇಜಿನ ಪ್ರಾಂಶುಪಾಲರು ವಿಶ್ವವಿದ್ಯಾಲಯಕ್ಕೆ ಸರಣಿ ಪತ್ರಗಳನ್ನು ಬರೆದಿದ್ದಾರೆ. ಆದರೆ, ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಪರಿಶೀಲಿಸಿದಾಗ ಉತ್ತರ ಪತ್ರಿಕೆಗಳು ನಾಪತ್ತೆಯಾಗಿರುವುದು ಅಧಿಕೃತವಾಗಿ ಬೆಳಕಿಗೆ ಬಂದಿದೆ.
ಮುಂದುವರೆದು, ಕಾಲೇಜಿನ ಪ್ರಾಂಶುಪಾಲರು ಎಲ್ಲಾ ಉತ್ತರ ಪತ್ರಿಕೆಗಳನ್ನು ಅಂಚೆ ಮೂಲಕ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದರು ಮತ್ತು ಅವು ವಿವಿಯ ಮೌಲ್ಯಮಾಪನ ವಿಭಾಗಕ್ಕೆ ತಲುಪಿದ್ದವು. ಆದರೂ ಅವು ನಾಪತ್ತೆಯಾಗಿರುವುದು ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ತೀವ್ರ ಬೇಜವಾಬ್ದಾರಿತನ ಮತ್ತು ಮ್ಯಾನೇಜ್ಮೆಂಟ್ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಸಿಂಡಿಕೇಟ್ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ, ಇತರ ವಿಷಯಗಳ ಅಂಕಗಳನ್ನು ಆಧರಿಸಿ ಇವರಿಗೆ ಫಲಿತಾಂಶ ಪ್ರಕಟಿಸುವುದು ಸರಿಯಾದ ಕಾನೂನುಬದ್ಧ ಪರಿಹಾರವಲ್ಲ ಎಂದು ಸಿಂಡಿಕೇಟ್ ಸದಸ್ಯರು ಅಭಿಪ್ರಾಯಪಟ್ಟಿದ್ದು, ವಿವಿಯ ಇಂತಹ ಯಡವಟ್ಟುಗಳಿಂದ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಹಾಗೂ ಭವಿಷ್ಯಕ್ಕೆ ಕಂಟಕ ಎದುರಾಗಿದೆ.
ಏತನ್ಮಧ್ಯೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಈ ರೀತಿಯಾಗಿ ಉತ್ತರ ಪತ್ರಿಕೆಗಳು ನಾಪತ್ತೆಯಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಇಂತಹ ಹಲವು ಪ್ರಕರಣಗಳು ವರದಿಯಾಗಿದ್ದವು ಎನ್ನಲಾಗಿದೆ.