ಬೆಳಗಾವಿ: ಗ್ರಾಮ ಪಂಚಾಯತಿ ಕಚೇರಿಗೆ ಆಸ್ತಿ ಪಾಲು ಮಾಡಲು ಅರ್ಜಿ ಸಲ್ಲಿಸಲು ಬಂದಿದ್ದ ತಂದೆ ಮತ್ತು ಮಗಳನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಬೆಳಗಾವಿಯ ಕಿತ್ತೂರಿನ ಅವರಾದಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಧಾರವಾಡದ ನಿವಾಸಿಗಳಾದ 67 ವರ್ಷದ ಮಾಜಿ ಯೋಧ ರುದ್ರಪ್ಪ ಕುಂದರಗಿ ಹಾಗೂ 26 ವರ್ಷದ ಶಶಿಕಲಾ ಕುಂದರಗಿ ಎಂದು ಗುರುತಿಸಲಾಗಿದೆ. ರುದ್ರಪ್ಪ ಹಾಗೂ ಅವರ ಸಹೋದರರಾದ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ನಡುವೆ ಆಸ್ತಿ ಸಂಬಂಧ ಜಗಳವಿತ್ತು. 38 ಗುಂಟೆ ಆಸ್ತಿ ರುದ್ರಪ್ಪನ ಹೆಸರಿನಲ್ಲಿದ್ದು ಮೂವರು ಸಹೋದರರಿಗೂ ಸಮನಾಗಿ ಹಂಚುವಂತೆ ಕೋರ್ಟ್ ಆದೇಶ ಹೊರಡಿಸಿತ್ತು.
ಇನ್ನು ರುದ್ರಪ್ಪ ನನ್ನ ಪಾಲಿನ ಜಮೀನನ್ನು ಮೊದಲೇ ಮಾರಾಟ ಮಾಡಿಕೊಂಡಿದ್ದು ಉಳಿದ ಜಮೀನಿನಲ್ಲೂ ತನಗೆ ಪಾಲು ಬೇಕು ಎಂದು ಪಟ್ಟು ಹಿಡಿದಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಸಹೋದರರು ಗ್ರಾಮ ಪಂಚಾಯತಿ ಕಚೇರಿಗೆ ಅರ್ಜಿ ಸಲ್ಲಿಸಲು ಬಂದಿದ್ದ ಅಣ್ಣ ರುದ್ರಪ್ಪ ಹಾಗೂ ಪುತ್ರಿ ಶಶಿಕಲಾಳನ್ನು ಕಚೇರಿಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.