ಬೆಂಗಳೂರು: 2020ರ ದೆಹಲಿ ಗಲಭೆ ಪ್ರಕರಣ ಸಂಬಂಧ ಜೈಲು ಸೇರಿರುವ ಉಮರ್ ಖಾಲಿದ್ ಒಬ್ಬ ರಾಷ್ಟ್ರೀಯವಾದಿ. ಆತನ ಬಗ್ಗೆ ಮಾತನಾಡಲು ಎಬಿವಿಪಿಗೆ ಯಾವುದೇ ಹಕ್ಕಿಲ್ಲ ಎಂದು ಹೇಳಿದ್ದ KPCC ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಾಗಿದೆ.
ದೆಹಲಿಯಲ್ಲಿ ಗಲಭೆ ಎಬ್ಬಿಸಿದವನ ಪರ ಮಾತನಾಡುತ್ತಾರೆ. ಸಮಾಜದಲ್ಲಿ ದ್ವೇಷ ಮೂಡುವಂತ ಹೇಳಿಕೆ ನೀಡಿದ್ದಾರೆ. ಅಲ್ಲದೆ ಎಬಿವಿಪಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಬಿಕೆ ಹರಿಪ್ರಸಾದ್ ವಿರುದ್ಧ ಹಿಂದೂಪರ ಹೋರಾಟಗಾರ ತೇಜಸ್ ಗೌಡ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ.
ಒಬ್ಬ ಭಯೋತ್ಪಾದಕನ ಬಗ್ಗೆ ವಿಧಾನಸೌಧದಲ್ಲಿ ನಿಂತು ಬಿಕೆ ಹರಿಪ್ರಸಾದ್ ಹೇಳಿಕೆ ನೀಡುತ್ತಿದ್ದಾರೆ ಎಂದು ತೇಜಸ್ ಗೌಡ ಹೇಳಿದ್ದಾರೆ. ಭಯೋತ್ಪಾದಕರ ಬಗ್ಗೆ ಮಾತನಾಡುವವರು ಭಯೋತ್ಪಾದಕರಿಗೆ ಸಮ ಎಂದು ತೇಜಸ್ ಗೌಡ ಹೇಳಿದ್ದು ಪೊಲೀಸರು ಕಾನೂನು ತಜ್ಞರ ಸಲಹೆ ಪಡೆದು ಕ್ರಮಕೈಗೊಳ್ಳುತ್ತೇನೆ ಹೇಳಿದ್ದಾರೆ.