ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್ಗೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಇದೀಗ ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಅವಕಾಶ ನೀಡಿದೆ.
ಹೌದು. ಪ್ರಕರಣದ ಆರೋಪಿ ಆಗಿರುವ ಪ್ರದೋಶ್, ಮಾಫಿ ಸಾಕ್ಷಿ ದಾಖಲಿಸಲು ಅರ್ಜಿ ಹಾಕಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಅರ್ಜಿಯನ್ನು ಕೋರ್ಟ್ ತಳ್ಳಿ ಹಾಕಿದೆ. ಆದರೆ ದರ್ಶನ್ ಸಲ್ಲಿಸಿದ್ದ ಮತ್ತೊಂದು ಅರ್ಜಿಯಲ್ಲಿ ಮುನ್ನಡೆ ದೊರೆತಿದೆ.
ಈ ಹಿಂದೆ ಸಾಕ್ಷ್ಯಗಳ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಖುದ್ದು ಹಾಜರಿರಲು ದರ್ಶನ್ ಅವಕಾಶ ಕೇಳಿದ್ದರು. ಸಾಕ್ಷಿಗಳ ವಿಚಾರಣೆ ನಡೆಸುವಾಗ ದರ್ಶನ್ ಖುದ್ದು ಹಾಜರಿದ್ದರೆ ಕಕ್ಷಿದಾರರೊಡನೆ ಚರ್ಚಿಸುವುದು ಸುಲಭವಾಗುತ್ತದೆ. ಈಗ ವಿಡಿಯೋ ಕಾನ್ಫರೆನ್ಸ್ನಲ್ಲಿ ಅದು ಸಾಧ್ಯವಾಗುವುದಿಲ್ಲ. ವಿಡಿಯೋ ಕಾನ್ಫರೆನ್ಸ್ನಲ್ಲಿ ಖಾಸಗಿತನ ಇರುವುದಿಲ್ಲ. ಎಲ್ಲರ ಎದುರೇ ಕಕ್ಷಿದಾರರೊಟ್ಟಿಗೆ ಚರ್ಚಿಸಬೇಕಾಗುತ್ತದೆ. ಅದು ಸಾಕ್ಷಿಯ ಹೇಳಿಕೆ ಮೇಲೆ ಪ್ರಭಾವ ಬೀರುತ್ತದೆ ಎಂದು ದರ್ಶನ್ ಪರ ವಕೀಲರು ನ್ಯಾಯಾಧೀಶರ ಬಳಿ ಕೇಳಿಕೊಂಡಿದ್ದರು.
ಇದೀಗ ಸಾಕ್ಷ್ಯ ವಿಚಾರಣೆ ವೇಳೆ ಖುದ್ದು ಹಾಜರಾಗಲು ದರ್ಶನ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಷರತ್ತುಗಳ ಮೇರೆಗೆ ಖುದ್ದು ಹಾಜರಿಗೆ ಸಮ್ಮತಿ ನೀಡಿದೆ. ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಪೀಠದ ಮುಂದೆ ಅರ್ಜಿಯ ವಿಚಾರಣೆ ನಡೆದಿದ್ದು ,ದರ್ಶನ್ ಅರ್ಜಿಗೆ ಸಮ್ಮತಿಸಿದ ಹೈಕೋರ್ಟ್, ಷರತ್ತುಬದ್ಧ ಅನುಮತಿ ಕೊಟ್ಟಿದೆ.
ಪ್ರಾಸಿಕ್ಯೂಷನ್ 1 ವರ್ಷದಲ್ಲಿ 60 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಬೇಕು, 7 ಮುಖ್ಯ ಸಾಕ್ಷಿಗಳ ವಿಚಾರಣೆಯೂ ಇದರಲ್ಲಿ ಸೇರಿರಬೇಕು, ಮುಖ್ಯ ವಿಚಾರಣೆ ಬಳಿಕ ಕ್ರಾಸ್ ಎಕ್ಸಾಮಿನೇಷನ್ಗೆ ಪ್ರತ್ಯೇಕ ದಿನಾಂಕ ಹಾಗೂ ನಿಗದಿತ ದಿನಾಂಕಗಳಂದು ಕ್ರಾಸ್ ಎಕ್ಸಾಮಿನೇಷನ್ ನಡೆಸಬೇಕು. ಈ ವೇಳೆ ಸರ್ಕಾರ ಸೂಕ್ತ ಭದ್ರತೆ ಒದಗಿಸಿ ದರ್ಶನ್ ಕರೆತರಬೇಕು ಎಂದು ಪೀಠ ಆದೇಶಿಸಿದೆ. ಹೈಕೋರ್ಟ್ನ ಆದೇಶದಿಂದಾಗಿ ದರ್ಶನ್, ಕೋರ್ಟ್ಗೆ ಬರುವಂತಾಗಿದೆ.