ಬೇಸಿಗೆ ರಜೆ ಮುಗಿದು ಮಕ್ಕಳಿಗೆ ಶಾಲೆ ಆರಂಭವಾದಾಗ ಪುಟ್ಟ ಮಕ್ಕಳನ್ನು ಶಾಲೆಗೆ ಹೊರಡಿಸುವುದು ಅಮ್ಮಂದಿರಿಗೆ ಪ್ರಯಾಸದ ಕೆಲಸ. ಇನ್ನು ಮಕ್ಕಳಿಗೆ ಡಬ್ಬಿಗೆ ಕಳುಹಿಸಿಕೊಡು ವುದಂತೂ ಬಹುಪಾಲು ಅಮ್ಮಂದಿರಿಗೆ ಸಮಸ್ಯೆ. ಅದರಲ್ಲೂ ಕೆಲಸಕ್ಕೆ ಹೋಗುವ ತಾಯಂದಿರಿಗೆ ಕೇಳುವುದೇ ಬೇಡ.ಮಕ್ಕಳು ಬೆಳಗ್ಗೆ ಏನೂ ತಿನ್ನುವುದಿಲ್ಲ, ಖಾಲಿ ಹೊಟ್ಟೆಯಲ್ಲಿ ಶಾಲೆಗೆ ಹೋಗುತ್ತಾರೆ, ಕಟ್ಟಿಕೊಟ್ಟ ಬುತ್ತಿ ಖಾಲಿಯಾಗದೆ ವಾಪಸು ಬರುತ್ತದೆ. ಅದರ ಮಧ್ಯೆ ತಮ್ಮ ತಿಂಡಿ, ಡಬ್ಬಿಗೆ ಹಾಕಿಕೊಳ್ಳುವುದು ಇತ್ಯಾದಿಗಳನ್ನು ಕೆಲಸಕ್ಕೆ ಹೋಗುವ ತಾಯಂದಿರು ನೋಡಿಕೊಳ್ಳಬೇಕು.
ಉದ್ಯೋಗದಲ್ಲಿರುವ ಮಹಿಳೆಯರ ಈ ಸಮಸ್ಯೆಯನ್ನು ಮನಗಂಡಿರುವ ಫಿಟ್ ನೆಸ್ ಗೆ ಹೆಸರಾಗಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮಕ್ಕಳಿಗೆ ಹೇಗೆ ಒಳ್ಳೊಳ್ಳೆಯ ರುಚಿಕರ ಆಹಾರವನ್ನು ತಯಾರಿಸಿ ಶಾಲೆಗೆ ಕಳುಹಿಸಿಕೊಡಬಹುದು, ಉದ್ಯೋಗಕ್ಕೆ ತೆರಳುವ ಮಹಿಳೆಯರು ಏನು ಮಾಡಬಹುದು ಎಂದು ಹೇಳಿದ್ದಾರೆ.
ಮಕ್ಕಳಿಗೆ ಆರೋಗ್ಯಯುತ ಬೆಳಗಿನ ಆಹಾರದ ಅಗತ್ಯ ಎಂದಿರುವ ಶಿಲ್ಪಾ ಶೆಟ್ಟಿ, ಬಹುತೇಕ ಸಮಯದಲ್ಲಿ ಬೆಳ್ಳಂಬೆಳಗ್ಗೆ ಶೂಟಿಂಗ್ ಗೆ ಹೋಗಬೇಕಾಗುತ್ತದೆ. ಮುಂಬೈಯ ಮಲದ್ ಮತ್ತು ಮದ್ ದ್ವೀಪದಂತ ದೂರದ ಪ್ರದೇಶಗಳಲ್ಲಿ ಶೂಟಿಂಗ್ ಮಾಡುತ್ತಿರುವಾಗ ನನಗೆ ಭಯವಾಗುತ್ತದೆ. ದೇವರೇ ಏನು ಮಾಡುವುದಪ್ಪಾ, ನನ್ನ ಮಗನನ್ನು ಶಾಲೆಗೆ ತಿಂಡಿ ಕೊಟ್ಟು ಕಳುಹಿಸಬೇಕು. ನನಗೆ ಬೆಳಗ್ಗಿನ ಉಪಾಹಾರ ತಿನ್ನಲು ಕೂಡ ಸಮಯವಿರುವುದಿಲ್ಲ. ಅಂತಹ ಸಂದರ್ಭದಲ್ಲಿ ದವಸ ಧಾನ್ಯಗಳು, ತಾಜಾ ಹಣ್ಣು, ಮೊಸರು ಮತ್ತು ತೆಂಗಿನ ಕಾಯಿ ಹಾಲನ್ನು ಮಿಶ್ರಣ ಮಾಡಿ ನನ್ನ ಕಾರಿನಲ್ಲಿಟ್ಟುಕೊಂಡು ತಿನ್ನುತ್ತೇನೆ. ಹೀಗಾಗಿ ನನಗೆ ಬೆಳಗಿನ ತಿಂಡಿ ತಿನ್ನಲು ಸಮಯವಿಲ್ಲ ಎಂದು ತಪ್ಪಿಸುವ ಪ್ರಮೇಯವೇ ಬರುವುದಿಲ್ಲ ಎನ್ನುತ್ತಾರೆ.
ಬೆಳಗ್ಗೆ ಆರೋಗ್ಯಯುತ ಆಹಾರ ತಿನ್ನುವ ಮೂಲಕ ದಿನವನ್ನು ಆರಂಭಿಸಬೇಕು. ಯಾರೂ ಕೂಡ ಬೆಳಗ್ಗೆ ತಿಂಡಿ ತಿನ್ನದೆ ಇರಬಾರದು ಎನ್ನುತ್ತಾರೆ ಶಿಲ್ಪಾ ಶೆಟ್ಟಿ.