ಹಿನ್ನೋಟ 2015

ಅರಮನೆಗೆ ಹರ್ಷ ತಂದ 2015 ನೇ ವರ್ಷ

Srinivas Rao BV
2014 ರಲ್ಲಿ ಮಹಾರಾಜ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರ ನಿಧನದ ನಂತರ ಉತ್ತರಾಧಿಕಾರಿ ಇಲ್ಲದೇ ಮೈಸೂರು ಅರಮನೆ ರಾಜನಿಲ್ಲದೇ ಕಳೆಗುಂದಿತ್ತು.
2015 ರ ಫೆಬ್ರವರಿ 23 ರಂದು ಮಹಾರಾಣಿ  ಪ್ರಮೋದಾ ದೇವಿ ಯದುವೀರ್ ಗೋಪಾಲರಾಜ್ ಅರಸ್ ಅವರನ್ನು ದತ್ತು ಪುತ್ರರಾಗಿ ಸ್ವೀಕರಿಸಿ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಂದು ನಾಮಕರಣ ಮಾಡಿದ್ದು ಐತಿಹಾಸಿಕ ಘಟನೆ. ಮೇ 28ರಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಪಟ್ಟಾಭಿಷೇಕ ನಡೆದು ಯದುವೀರ್ ಒಡೆಯರ್ ಅಧಿಕೃತವಾಗಿ ಮೈಸೂರು ಸಂಸ್ಥಾನದ 27 ನೇ ಮಹಾರಾಜರಾಗಿ ಪಟ್ಟಾಭಿಷಿಕ್ತಗೊಂಡದ್ದು ಮತ್ತೊಂದು ಐತಿಹಾಸಿಕ ಘಟನೆ.
ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರ ನಿಧನದಿಂದಾಗಿ 2014 ರಲ್ಲಿ ಮೈಸೂರು ದಸರಾ ಸಹ ಕಳೆಗುಂದಿತ್ತು. ರಾಜನಿಲ್ಲದೇ ಪಟ್ಟದ ಕತ್ತಿಯನ್ನು ಸಿಂಹಾಸನದ ಮೇಲಿಟ್ಟು ದರ್ಬಾರ್ ನಡೆಸಲಾಗಿತ್ತು. 2015 ರಲ್ಲಿ ಪ್ರಥಮ ಬಾರಿಗೆ ಯದುವೀರ್ ಒಡೆಯರ್ ಮೈಸೂರಿನ ಪರಂಪರಾಗತ ಸಿಂಹಾಸನಾರೋಹಣ ನೆರವೇರಿಸಿ ಅರಮನೆಯಲ್ಲಿ ದಸರಾ ಆಚರಣೆ ರಾಜಗೌರವಗಳೊಂದಿಗೆ ವಿಜೃಂಭಣೆಯಿಂದ ನಡೆದಿತ್ತು.
'ದಿ.ಶ್ರೀಕಂಠದತ್ತ ಒಡೆಯರು ನಿಧನರಾದ 14 ತಿಂಗಳ ಬಳಿಕ, ಐತಿಹಾಸಿಕ ಯದುವಂಶಕ್ಕೆ ಒಬ್ಬ ಸಮರ್ಥ ಉತ್ತರಾಧಿಕಾರಿಯನ್ನು ಹುಡುಕಲಾಯಿತು. ಯದುವೀರ ಒಡೆಯರ್ ತಂದೆ ಬೆಟ್ಟದ ಕೋಟೆ ಅರಸು ಪರಂಪರೆಯವರು. ಜಯಚಾಮರಾಜ ಒಡೆಯರ ಮರಿಮಗ. ದಿ.ಶ್ರೀಕಂಠದತ್ತ ಒಡೆಯ'ರ ಹಿರಿಯ ಸೋದರಿ 'ದಿ.ಗಾಯತ್ರಿ ದೇವಿ', ಮತ್ತು 'ದಿ.ರಾಮಚಂದ್ರ ಅರಸ್ ರ ಪುತ್ರಿ 'ತ್ರಿಪುರ ಸುಂದರೀ ದೇವಿ' ಮತ್ತು 'ಸ್ವರೂಪ್ ಗೋಪಾಲ ರಾಜೇ ಅರಸ್', ರವರ ಏಕೈಕ ಪುತ್ರ. ಯದುವೀರ್ ಗೆ ಒಬ್ಬ ಸೋದರಿ 'ಜಯಾತ್ಮಿಕಾ' ಇದ್ದಾರೆ.
ಬೆಂಗಳೂರಿನ, 'ವಿದ್ಯಾನಿಕೇತನ್ ಶಿಕ್ಷಣ ಸಂಸ್ಥೆ'ಯಲ್ಲಿ 'ಎಸ್. ಎಸ್.ಎಲ್.ಸಿ'. ತರಗತಿ ಮುಗಿಸಿ, 'ಕೆನೆಡಿಯನ್ ಅಂತಾರಾಷ್ಟ್ರೀಯ ಶಾಲೆ'ಯಲ್ಲಿ 12  ನೆಯ ತರಗತಿಯವರೆಗೆ ಓದಿರುವ ಯದುವೀರ್, ಅಮೆರಿಕದಲ್ಲಿ 'ಬಾಸ್ಟನ್ ವಿಶ್ವವಿದ್ಯಾಲಯ'ದಲ್ಲಿ ಅರ್ಥಶಾಸ್ತ್ರ ಮತ್ತು ಆಂಗ್ಲಭಾಷಾ ವಿಷಯಗಳಲ್ಲಿ ಬಿ.ಎ; ಪದವಿ ಅಧ್ಯಯನ ಮಾಡಿದ್ದಾರೆ.
SCROLL FOR NEXT