ಶ್ವೇತ ಕುಮಾರ ಎಂಬ ರಾಜ ಸತ್ತು ಪ್ರೇತನಾಗುತ್ತಾನೆ. ಅವನ ಆತ್ಮವನ್ನು ಯಮಲೋಕಕ್ಕೆ ತೆಗೆದುಕೊಂಡು ಹೋದ ಮೇಲೆ ಇದ್ದಂತ ಕರ್ಮ ಅಧರ್ಮ ಎಲ್ಲವನ್ನು ಲೆಕ್ಕಚಾರ ಹಾಕಬೇಕಾದರೆ, ಇವನು ಈ ರೀತಿ ಪಾಪ ಕರ್ಮಗಳನ್ನು ಮಾಡಿದ್ದಾನೆ ಎಂದು ಚಿತ್ರಗುಪ್ತ ಯಮಧರ್ಮರಾಜನಿಗೆ ಹೇಳುತ್ತಾರೆ. ಆಗ ಕಡೆಯ ಆಸೆ ಏನಾದರೂ ಇದ್ದರೆ ಹೇಳು, ಅದು ಈಡೇರಿಸಿ, ನಿನಗೆ ನೀಡಬೇಕಾದ ಶಿಕ್ಷೆ ನೀಡುತ್ತೇವೆ ಎಂದು ಯಮನು ಕೇಳಿದಾಗ, ಆತ ನಾನು ಒಂದು ದಿವಸ ರಂಭೆ ಜೊತೆಯಲ್ಲಿ ಇರಬೇಕು ಎಂದು ಕೇಳುತ್ತಾನೆ. ಅವನ ಮಾತನ್ನು ಕೇಳಿ ಯಮಧರ್ಮರಾಜ ಮುಗಳ್ನಕ್ಕು, ಪ್ರೇತ ಹೋಗಿ ರಂಭೆ ಜೊತೆ ಹೇಗೆ ಕಾಲ ಕಳೆಯುತ್ತದೆ ಎಂದು ವ್ಯಂಗ್ಯವಾಡುತ್ತಾರೆ. ನಿನಗೆ ವಾಗ್ಧಾನ ನೀಡಲಾಗಿದೆ ಎಂದ ಯಮರಾಜ, ರಂಭೆಯನ್ನು ಕರೆಸಿ ಒತ್ತಾಯದ ಮೇರೆಗೆ ನೀನು ಒಂದು ದಿವಸ ಈ ಪ್ರೇತದ ಜೊತೆ ಇರಬೇಕು ಎಂದು ಆಜ್ಞೆ ಮಾಡುತ್ತಾನೆ.
ಆದರೆ, ರಂಭೆಗೆ ಇದು ಇಷ್ಟವಿರುವುದಿಲ್ಲ. ದೇವತೆಗಳ ಜೊತೆ ಇರುವ ಅಪ್ಸರೆ ನಾನು ಪ್ರೇತಗಳೊಂದಿಗೆ ಇರುವುದು ಸಾಧ್ಯವಿಲ್ಲ ಎಂದು ಹೇಳಿ ಪ್ರೇತಕ್ಕೆ ಒಂದು ಶರತ್ತನ್ನು ಹಾಕುತ್ತಾಳೆ. ನಾನು ನಿನ್ನ ಜೊತೆ ಒಂದು ದಿವಸ ಇರುತ್ತೇನೆ. ಆದರೆ, ಒಂದು ತಪಸ್ಸನ್ನು ಮಾಡುವುದನ್ನು ಹೇಳಿ ಕೊಡುತ್ತೇನೆ. ಅದನ್ನು ಮಾಡಿ ನೀನು ದೇಹವನ್ನು ಪಡೆದುಕೊ, ಆಗ ನಾನು ನಿನ್ನೊಂದಿಗೆ ಇರುತ್ತೇನೆ ಎಂದು ಹೇಳುತ್ತಾಳೆ. ಏನದು, ನಾನು ಯಾವ ತಪಸ್ಸು ಮಾಡಬೇಕು ಎಂದು ಕೇಳುತ್ತಾನೆ. ಆಗ ರಂಭೆ, ಇಲ್ಲಿ ಕುಳಿತುಕೊಂಡು ಧ್ಯಾನಮಗ್ನನಾಗಿ ಓಂ ನಮಃ ಶಿವಾಯ ಎಂದು ಹೇಳಬೇಕು ಎಂದು ತಿಳಿಸುತ್ತಾಳೆ.
ರಂಭೆ ಸಿಗುತ್ತಾಳೆ ಎಂಬ ಒಂದೇ ಬಯಕೆಯಲ್ಲಿ ಆ ಪ್ರೇತ ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಃ ಶಿವಾಯ... ಹೇಳುತ್ತಾ ಜಪ ಮಾಡುತ್ತಿತಂತೆ. ಇತ್ತ ಯಮರಾಜ ಕೊಟ್ಟ ಸಮಯವೂ ಮುಗಿದುಹೋಗಿತ್ತು.
ಸಮಯ ಮುಗಿದ ತಕ್ಷಣ ಯಮರಾಜ ಚಿತ್ರಗುಪ್ತನನ್ನು ಹೋಗಿ ಪ್ರೇತನನ್ನು ಕರೆದುಕೊಂಡು ಬಾ ಎಂದು ಕಳುಹಿಸಿಕೊಟ್ಟನು. ಚಿತ್ರಗುಪ್ತ ಪ್ರೇತನಲ್ಲಿ ಬಂದು ರಂಭೆಯೊಡನೆ ನಿನಗೆ ಕೊಟ್ಟ ಸಮಯ ಮುಗಿದುಹೋಗಿದೆ ಬಾ ಈಗ ಎಂದು ಚಿತ್ರಗುಪ್ತಾ ಕರೆಯುತ್ತಿದ್ದರೂ. ಚಿತ್ರಗುಪ್ತನ ಮಾತುಗಳು ಪ್ರೇತನಿಗೆ ಕೇಳಸಿಲ್ಲ. ಧ್ಯಾನದಲ್ಲೇ ಪ್ರೇತವು ಮಗ್ನವಾಗಿ ಹೋಗಿದೆ.
ಆಗ ಯಮಪಾಶವನ್ನು ಆ ಪ್ರೇತನಿಗೆ ಹಾಕಿದಾಗ, ತ್ರಿಶೂಲ ಬಂದು ಆ ಪಾಶವನ್ನ ಕತ್ತರಿಸಿತಂತೆ. ಈ ಮೂಲಕ ಪ್ರೇತನಿಗೆ ಮುಕ್ತಿ ದೊರಕಿದೆ ಎಂದು ಪೂರಾಣ ಹೇಳುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos