ನವದೆಹಲಿ: 64 ವರ್ಷಗಳಿಂದಿರುವ ಯೋಜನಾ ಆಯೋಗವನ್ನು ರದ್ದು ಮಾಡುವುದು ಬೇಡ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ನಡೆದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಯೋಜನಾ ಆಯೋಗದಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಕಳೆದ 64 ವರ್ಷಗಳಿಂದಲೂ ಯೋಜನಾ ಆಯೋಗ ಅಸ್ತಿತ್ವದಲ್ಲಿದೆ. ಇಂತಹ ಸುದೀರ್ಘ ಇತಿಹಾಸವನ್ನು ಹೊಂದಿರುವ ಯೋಜನಾ ಆಯೋಗವನ್ನು ರದ್ದು ಮಾಡುವುದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ ಎಂದು ಹೇಳಿದರು.
'ಯೋಜನಾ ಆಯೋಗವನ್ನು ರದ್ದು ಪಡಿಸುವ ಬದಲಿಗೆ ಈಗಿರುವ ಆಯೋಗವನ್ನು ಬದಲಿಸಿ, ಅದಕ್ಕೆ ಹೆಚ್ಚಿನ ಅಧಿಕಾರ ನೀಡುವ ಮೂಲಕ ಬಲಪಡಿಸಬೇಕು. ಯೋಜನಾ ಆಯೋಗದಲ್ಲಿ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಆಯೋಗದ ರದ್ಧತಿಗೆ ಕೇವಲ ಕಾಂಗ್ರೆಸ್ ಸರ್ಕಾರ ವಿರುವ ಮುಖ್ಯಮಂತ್ರಿಗಳಲ್ಲದೇ ಪಶ್ಚಿಮ ಬಂಗಾಳ ಮತ್ತು ಬಿಹಾರ ಸರ್ಕಾರಗಳು ಕೂಡ ವಿರೋಧ ವ್ಯಕ್ತರಪಡಿಸಿವೆ. ಹೀಗಾಗಿ ಆಯೋಗದ ರದ್ಧತಿ ಚಿಂತನೆಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ಕರ್ನಾಟಕದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಊಟದ ಸಮಯದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ತಾವು ಚರ್ಚಿಸಿದ್ದೇವೆ. ತಂತ್ರಜ್ಞಾನ ಬೆಳವಣಿಗೆ, ಆಡಳಿತಾಭಿವೃದ್ಧಿ ಮತ್ತು ಮೊಬೈಲ್ ಆಡಳಿತದ ಬಗ್ಗೆಯೂ ಚರ್ಚೆ ನಡೆಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಇಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಅವರ ದೆಹಲಿಯ 7ಆರ್ಸಿಆರ್ ನಿವಾಸದಲ್ಲಿ ಇಂದು ನಡೆದ ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಹೊರತು ಪಡಿಸಿದರೆ, ಬಹತೇಕ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು.