ಬೆಂಗಳೂರು: ರಾಜ್ಯ ಸರ್ಕಾರ ನೇಮಿಸಿ ಹೊರಡಿಸಿರುವ ನಿಗಮ ಮಂಡಳಿ ಅಧ್ಯಕ್ಷರ ಪೈಕಿ 15 ನಿಗಮ ಮಂಡಳಿಗಳು ನಷ್ಟ ಅನುಭವಿಸುತ್ತಿದ್ದು, ಅವರ ನೇಮಕ ಆದೇಶ ರದ್ದು ಪಡಿಸಬೇಕೆಂದು ಕೋರಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿದೆ.
ನಷ್ಟದಲ್ಲಿರುವ 15 ಸಾರ್ವಜನಿಕ ಉದ್ದಿಮೆಗಳಿಗೆ ಸರ್ಕಾರ ಅಧ್ಯಕ್ಷರ ನೇಮಕ ಮಾಡಿದೆ. ಇದರಿಂದ ಇಲಾಖೆಗೆ ಹೆಚ್ಚುವರಿ 2 ಲಕ್ಷ ಬೀಳಲಿದೆ. ನಷ್ಟದಲ್ಲಿರುವ ಇಲಾಖೆಗಳಿಗೆ ಈಗಾಗಲೇ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಅಧ್ಯಕ್ಷರ ನೇಮಕ ಅವಶ್ಯವಿಲ್ಲ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ರಾಜ್ಯ ಸರ್ಕಾರ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನಕ್ಕೆ ನೇಮಿಸುವ ಸಂಬಂಧ ಕನಿಷ್ಠ ವಿದ್ಯಾರ್ಹತೆ ಸೇರಿದಂತೆ ಇತರೆ ಅಗತ್ಯ ಹಾಗೂ ಮಾರ್ಗಸೂಚಿಗಳನ್ನೂ ಇದುವರೆಗೆ ಸಿದ್ಧಪಡಿಸಿಲ್ಲ. ನೇಮಕವಾಗುವ ಅಧ್ಯಕ್ಷರು ಸೋತ ಸಂಸದರು, ಇಲ್ಲವೇ ಮಾಜಿಶಾಸಕರಾಗಿರುತ್ತಾರೆ.
ಆಡಳಿತ ರೂಢ ಪಕ್ಷಕ್ಕೆ ನಿಷ್ಟ ಕಾರ್ಯಕರ್ತರಾಗಿರುವುದೇ ಅಧ್ಯಕ್ಷರ ನೇಮಕಕ್ಕೆ ಶ್ರೀರಕ್ಷೆ. ನಿಗಮ ಮಂಡಳಿ ಅಧ್ಯಕ್ಷರ ನೇಮಕ ಎಂಬುದು ಒಂದು ರೀತಿಯಲ್ಲಿ ಸೋತ ಅಭ್ಯರ್ಥಿಗಳಿಗೆ ಹಾಗೂ ಪಕ್ಷದ ನಿಷ್ಠಾವಂತರಿಗೆ ಪುನರ್ವಸತಿ ಕಲ್ಪಿಸುವ ವ್ಯವಸ್ಥೆಯಾಗಿದೆ ಎಂದು ಅರ್ಜಿದಾರರರಾದ ಎನ್.ಪಿ.ಅಮೃತೇಶ್ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಅರ್ಜಿ ಕೈಗೆತ್ತಿಕೊಂಡ ನ್ಯಾ.ಎ.ಎನ್.ವೇಣುಗೋಪಾಲ್ ಗೌಡ ಹಾಗೂ ನ್ಯಾ,ಬಿ.ವಿ.ನಾಗರತ್ನ ಅವರಿದ್ದ ರಜಾಕಾಲದ ವಿಭಾಗೀಯ ಪೀಠ ವಿಚಾರಣೆಯನ್ನು ಮುಂದೂಡಿದೆ.
ಯಾವುದು ನಷ್ಟದಲ್ಲಿದೆ?