ಮುಂಬೈ: ಬಿಜೆಪಿ ವಿಶ್ವಾಸ ಮತ ಗೆದ್ದಿರಬಹುದು ಆದರೆ ಜನರ ನಂಬಿಕೆ ಗೆಲ್ಲುವುದರಲ್ಲಿ ಸೋತಿದೆ ಎಂದು ಶಿವಸೇನಾ ತನ್ನ ಸಾಮ್ನಾ ಪತ್ರಿಕೆಯಲ್ಲಿ ಬರೆದುಕೊಂಡಿದೆ.
ಸರ್ಕಾರ ನಡೆಸುವುದು ಮಕ್ಕಳ ಆಟವಲ್ಲ, ಕೈಯಲ್ಲಿ ಅಧಿಕಾರವಿದೆ ಎಂದು ಶಾಸಕರನ್ನು ಅಮಾನತು ಮಾಡಿ, ಮುಂದಿನ ಆರು ತಿಂಗಳಲ್ಲಿ ವಿಶ್ವಾಸ ಮತ ಗೆಲ್ಲಲು ಸಾಧ್ಯವಿಲ್ಲ. ಜನರನ್ನು ಮೂರ್ಖರನ್ನಾಗಿಸಿ ಮೋಸಗೊಳಿಸುವ ಪ್ರಯತ್ನ ನಡೆಸಿದರೆ ನಿಮ್ಮ ಹಳ್ಳಕ್ಕೆ ನೀವೇ ಬಿದ್ದಂತಾಗುತ್ತದೆ ಎಂದು ಶಿವಸೇನೆ ತನ್ನ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಿಕೊಂಡಿದೆ.
ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಚೊಚ್ಚಲ ಬಿಜೆಪಿ ಸರ್ಕಾರ ಎನ್ ಸಿಪಿ ನೆರವಿನಿಂದ ಬುಧವಾರ ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ ಬಹುಮತ ಸಾಬೀತುಪಡಿಸಿತ್ತು. ಇದನ್ನು ತೀವ್ರವಾಗಿ ವಿರೋಧಿಸಿದ್ದ ಶಿವಸೇನೆ ಹಾಗೂ ಕಾಂಗ್ರೆಸ್ ವಿಶ್ವಾಸಮತ ಯಾಚಿಸಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿತ್ತು. ಅಲ್ಲದ ಸದನ ಉದ್ದೇಶಿಸಿ ಭಾಷಣ ಮಾಡಲು ಬಂದ ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಅವರಿಗೂ ಗಾಯಗೊಳಿಸಿತ್ತು, ಈ ವೇಳೆ ರಾಜ್ಯಪಾಲರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಗದ್ದಲ ಉಂಟು ಮಾಡಿದ್ದ ಕಾಂಗ್ರೆಸ್ ನ ಐವರು ಶಾಸಕರನ್ನು ಸ್ಪೀಕರ್ 2 ವರ್ಷದವರೆಗೆ ಅಮಾನತು ಗೊಳಿಸಿದ್ದರು.
ಗಾಯಗೊಂಡಿರುವ ಗವರ್ನರ್ ವೇದಿಕೆಯವರೆಗೂ ನಡೆದುಕೊಂಡು ಹೋಗಿ ಧೀರ್ಘಕಾಲ ಭಾಷಣ ಮಾಡಿರುವುದು ಆಶ್ಚರ್ಯಕರವಾಗಿದ್ದು, ಅಧಿವೇಶನ ಭಾಷಣ ಸ್ಥಳದಲ್ಲಿದ್ದ ತಮಗೆ ಗವರ್ನರ್ ಮೇಲಿನ ಯಾವುದೇ ಗಾಯಗಳು ಕಾಣಿಸಿರಲಿಲ್ಲ. ಸುಳ್ಳು ಆರೋಪದ ಮೇಲೆ ಕಾಂಗ್ರೆಸ್ನ 5 ಮುಖಂಡರನ್ನು ಅಮಾನತುಗೊಳಿಸಿದ್ದಾರೆ ಎಂದು ಆರೋಪಿಸಿರುವ ಶಿವಸೇನೆ ಬಿಜೆಪಿ ಪಕ್ಷ ವಿಶ್ವಾಸ ಮತೆ ಗೆಲ್ಲಲು ಸಫಲವಾಗಿರಬಹುದು ಆದರೆ ಜನರ ನಂಬಿಕೆ ಗಳಿಸಲು ವಿಫಲವಾಗಿದ್ದು, ಎಲ್ಲಾ ನೈತಿಕ ಹಕ್ಕನ್ನು ಕಳೆದುಕೊಂಡಿದೆ ಎಂದು ಸಾಮ್ನಾದಲ್ಲಿ ಹೇಳಿಕೊಂಡಿದೆ.
ಕಾಂಗ್ರೆಸ್ ಮುಖಂಡರನ್ನು ಅಮಾನತುಗೊಳಿಸುವ ಮೂಲಕ ನಿಯಮಗಳನ್ನು ಗಾಳಿಗೆ ತೂರಿರುವ ಬಿಜೆಪಿ ಪಕ್ಷವನ್ನು ಜನರು ನೋಡುತ್ತಿದ್ದು ಮುಂದೊಂದು ದಿನ ಜನರ ಹೊಡೆತಕ್ಕೆ ಗುರಿಯಾಗಲಿದೆ ಎಂದು ಶಿವಸೇನೆ ಹೇಳಿದೆ.