ದೇಶ

ಭೂಗತ ಪಾತಕಿಗಳ ಸ್ಕೆಚ್‌ನಿಂದ ಪಾರಾದ ಮಹೇಶ್ ಭಟ್

Srinivasamurthy VN

ಮುಂಬೈ: ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಮತ್ತು ಅವರ ಇಡೀ ಕುಟುಂಬವನ್ನು ಕೊಂದು ಹಾಕುವ ಸ್ಕೆಚ್ ಹಾಕಿದ್ದ 13 ಗ್ಯಾಂಗಸ್ಟರ್‌ಗಳ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ.

ಮುಂಬೈನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಒಟ್ಟು 13 ಮಂದಿ ಗ್ಯಾಂಗಸ್ಟರ್‌ಗಳನ್ನು ಬಂಧಿಸಿದ್ದಾರೆ. ಈ ಎಲ್ಲ 13 ಮಂದಿ ಗ್ಯಾಂಗಸ್ಟರ್‌ಗಳು ಬಾಲಿವುಡ್‌ನ ಖ್ಯಾತ ನಾಮರನ್ನು ಗುರಿಯಾಗಿಸಿಕೊಂಡಿದ್ದರು ಎಂದು ತಿಳಿದುಬಂದಿದ್ದು, ಪ್ರಮುಖವಾಗಿ ನಿರ್ದೇಶಕ ಮಹೇಶ್ ಭಟ್ ಮತ್ತು ಅವರ ಕುಟುಂಬವನ್ನು ಈ ಗ್ಯಾಂಗ್ ಟಾರ್ಗೆಟ್ ಮಾಡಿ ಸ್ಕೆಚ್ ರೂಪಿಸಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಹೇಶ್ ಭಟ್ ಕೊಲ್ಲಲ್ಲು 11 ಲಕ್ಷ ಸುಪಾರಿ
ಖಾರ್ ಎಂಬ ಪ್ರದೇಶದಲ್ಲಿ ಸಂಚು ರೂಪಿಸುತ್ತಿದ್ದ ಈ 13 ಮಂದಿ ಗ್ಯಾಂಗಸ್ಟರ್‌ಗಳ ತಂಡವನ್ನು ಎಸಿಪಿ ಸುನಿಲ್ ದೇಶ್ ಮುಖ ಅವರ ತಂಡ ಬಂಧಿಸಿದೆ. ಅಲ್ಲದೆ ಬಂಧಿತರಿಂದ 4 ಪಿಸ್ತೂಲು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿಗಳು ಹೊರ ಬೀಳುತ್ತಿದ್ದು, ಮಹೇಶ್ ಭಟ್ ಅವರನ್ನು ಕೊಲ್ಲಲು ಅವರ ಮನೆಯಲ್ಲಿ ದುಷ್ಕರ್ಮಿಯೊಬ್ಬ ಕೆಲಸಕ್ಕೆ ಸೇರಲು ಪ್ರಯತ್ನಿಸಿದ್ದನಂತೆ. ವಾಚ್‌ಮನ್ ಹುದ್ದೆಯನ್ನು ಕೇಳಿಕೊಂಡು ಬಂದಿದ್ದ ದುಷ್ಕರ್ಮಿಯನ್ನು ಹುದ್ದೆ ಖಾಲಿ ಇಲ್ಲ ಎಂದು ಹೇಳಿ ವಾಪಸ್ ಕಳುಹಿಸಿಕೊಡಲಾಗಿತ್ತಂತೆ. ಮಹೇಶ್ ಭಟ್ ಮತ್ತು ಅವರ ಕುಟುಂಬದವರನ್ನು ಕೊಲ್ಲಲು ಈ ಗ್ಯಾಂಗಸ್ಟರ್‌ಗಳು ಸುಮಾರು 11 ಲಕ್ಷ ರು. ಸುಪಾರಿ ಪಡೆದುಕೊಂಡಿದ್ದರಂತೆ.

ಕಳೆದ ಆಗಸ್ಟ್‌ನಲ್ಲಿಯೂ ಇಂತಹುದೇ ಗ್ಯಾಂಗ್‌ವೊಂದು ಚಿತ್ರ ನಿರ್ಮಾಪಕ ಕರೀಮ್ ಮೊರಾನಿ ಅವರ ಬಂಗಲೆ ಮೇಲೆ ಗುಂಡಿನ ದಾಳಿ ನಡೆಸಿತ್ತು. ಪ್ರಸ್ತುತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಂಟಿ ಪೊಲೀಸ್ ಆಯುಕ್ತ ಸದಾನಂದ ದಾತೆ ಅವರು ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಈ ಕುರಿತಂತೆ ಸಹಾಯಕ ಪೊಲೀಸ್ ಆಯುಕ್ತ ಸುನಿಲ್ ದೇಶ್ ಮುಖ್ ಅವರ ನೇತೃತ್ವದ ತನಿಖಾ ತಂಡಕ್ಕೆ ಪ್ರಕರಣದ ಜವಾಬ್ದಾರಿ ನೀಡಲಾಗಿದ್ದು, ಬಂಧಿತರ ವಿರುದ್ಧ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ.

SCROLL FOR NEXT