ನವದೆಹಲಿ: ನ್ಯಾಯಾಂಗ ವ್ಯವಸ್ಥೆಯಲ್ಲಿ ರಾಜಕಾರಣಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಮೂಗು ತೂರಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯ ವಿಜ್ಞಾನ ಭವನದಲ್ಲಿ ಇಂದು ನಡೆದ ಅಖಿಲ ಭಾರತ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಹಾಗೂ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಸಮಗ್ರ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ನಮಗೆ ಇಂದು ಸಮರ್ಥ, ದಕ್ಷ ಹಾಗೂ ಸಶಕ್ತ ನ್ಯಾಯಾಂಗ ವ್ಯವಸ್ಥೆಯ ಅವಶ್ಯಕತೆಯಿದ್ದು, ನ್ಯಾಯಾಂಗದಲ್ಲಿ ಒಳ್ಳೆಯ ಜನರೇ ಭಾಗವಹಿಸಬೇಕು. ನೀವು ಈ ದೇಶದ ಭವಿಷ್ಯದ ಜನಾಂಗವನ್ನು ರೂಪಿಸುವವರು. ದೇವರು ನಿಮ್ಮ ಮೂಲಕ ಈ ಕೆಲಸ ಮಾಡಿಸುತ್ತಿದ್ದಾನೆ. ಆದ್ದರಿಂದ ನೀವು ಸರಿಯಾದ ಮಾರ್ಗದಲ್ಲೇ ನಡೆಯಬೇಕಾಗುತ್ತದೆ. ಈ ದೇಶದ ಕೋಟ್ಯಂತರ ಜನತೆ ನಿಮ್ಮ ಮೇಲೆ ಅಪಾರ ನಂಬಿಕೆ-ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು, ಜನತೆಯ ಆ ನಂಬಿಕೆ, ನಿರೀಕ್ಷೆಗಳು ಹುಸಿಯಾಗದಂತೆ ನೀವು ನಡೆದುಕೊಳ್ಳಬೇಕು.
ನ್ಯಾಯಾಧೀಶರೆಂದರೆ ದೇವರು, ನ್ಯಾಯಾಲಯ ಎಂದರೆ ದೇವಾಲಯಗಳು ಎಂದೇ ಜನ ನಂಬಿದ್ದಾರೆ. ಅವರ ನಂಬಿಕೆಗೆ ತಕ್ಕಂತೆ ನ್ಯಾಯಾಲಯಗಳಲ್ಲಿ ಅವರಿಗೆ ನ್ಯಾಯ ಒದಗಿಸಿಕೊಡುವ ಗುರುತರ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ. ಯಾವುದೇ ಕಾರಣಕ್ಕೂ ನ್ಯಾಯದಾನದಲ್ಲಿ ವಿಳಂಬವಾಗಬಾರದು ಮತ್ತು ಅನ್ಯಾಯವಾಗಬಾರದು. ಜನರ ನಿರೀಕ್ಷೆ, ನಂಬಿಕೆಗಳು ಹುಸಿಯಾದರೆ, ನ್ಯಾಯಾಂಗ ವ್ಯವಸ್ಥೆಯೇ ಹಾಳಾಗಿ ಹೋಗುತ್ತದೆ ಎಂದು ಮೋದಿ ಹೇಳಿದರು.
ಇದೇ ವೇಳೆ ನ್ಯಾಯಾಂಗದಲ್ಲಿ ಗುಣಾತ್ಮಕ ಬದಲಾವಣೆ ತರುವ ಅಗತ್ಯವಿದ್ದು, ರಾಜಕಾರಣಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಇದರಲ್ಲಿ ಮೂಗು ತೂರಿಸಬಾರದು ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.