ನವದೆಹಲಿ: ಉತ್ತರ ಭಾರತ ಹಾಗೂ ನೇಪಾಳದಾದ್ಯಂತ ಪ್ರಬಲ ಭೂಕಂಪ ಸಂಭವಿಸಿರುವ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ನಡೆದ ತುರ್ತುಸಭೆ ಅಂತ್ಯಗೊಂಡಿದೆ.
ತುರ್ತುಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವರಿಗೆ ಸಂತ್ರಸ್ಥರ ಕುರಿತಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ, ಸಭೆಯಲ್ಲಿ ನೇಪಾಳಕ್ಕೆ ನೆರವು ನೀಡುವ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ನೇಪಾಳಕ್ಕೆ ನೆರವು ನೀಡುವ ಸಲುವಾಗಿ ಇದೀಗ ಭಾರತದಿಂದ ನೇಪಾಳಕ್ಕೆ 2 ವಿಮಾನಗಳು ರವಾನೆಯಾಗುತ್ತಿವೆ. ವಿಮಾನದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 40 ತಜ್ಞರು ಹಾಗೂ 4 ಟನ್ ಔಷಧಿಗಳು ಕಳುಹಿಸಿಕೊಡಲಾಗುತ್ತಿದ್ದು, ಸಿ.130ಜೆ ಸೂಪರ್ ಹರ್ಕ್ಯುಲಸ್ ಎಂಬ ವಿಶೇಷ ವಿಮಾನವನ್ನು ಕಳುಹಿಸಿಕೊಡಲಾಗುತ್ತಿದೆ.