ದೇಶ

ದೇಶದಲ್ಲಿ ಅಪಾಯದ ಕರೆಗಂಟೆ: ಭಾರತೀಯರನ್ನು ಸೆಳೆಯುತ್ತಿರುವ ಉಗ್ರ ಸಂಘಟನೆ

Mainashree

ನವದೆಹಲಿ: ದೇಶದಲ್ಲಾಗುತ್ತಿರುವ ಯುವಕರ ಕಣ್ಮರೆಗೂ ಐಎಸ್‍ಐಎಸ್ ಉಗ್ರ ಸಂಘಟನೆಯ ಬಾಹುಗಳು ವ್ಯಾಪಿಸುತ್ತಿರುವುದಕ್ಕೂ ಸಂಬಂಧವಿದೆಯೇ? ಈ ಯುವಕರೆಲ್ಲ ಐಎಸ್ ಸೇರಿಕೊಂಡಿದ್ದಾರೆಯೇ ಅಥವಾ ಉಗ್ರ ಸಂಘಟನೆ ಪ್ರಬಲವಾಗಿರುವ ದೇಶಗಳತ್ತ ಪ್ರಯಾಣಿಸಿದ್ದಾರೆಯೇ? ಇಂತಹ ಪ್ರಶ್ನೆಗಳು ಈಗ ಬಲವಾಗತೊಡಗಿವೆ.

ಪ್ರಸಕ್ತ ತಿಂಗಳ ಆರಂಭದಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು 12 ರಾಜ್ಯಗಳ ಡಿಜಿಪಿಗಳು ಮತ್ತು ಗೃಹ ಕಾರ್ಯದರ್ಶಿಗಳ ಸಭೆ ನಡೆಸಿ, ಕಣ್ಮರೆಯಾಗಿರುವ 17 ಮಂದಿ ಯುವಕರ ಕುರಿತು ಚರ್ಚಿಸಿದೆ. ಭಾರತದ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರರ ಬೆದರಿಕೆಯನ್ನು ನಿರ್ಲಕ್ಷಿಸಲಾಗದು ಎಂದು ನವೆಂಬರ್‍ನಲ್ಲಷ್ಟೇ ಸರ್ಕಾರ ಹೇಳಿತ್ತು. ಈಗ 17 ಯುವಕರು ನಾಪತ್ತೆಯಾಗಿರುವ ಪ್ರಕರಣ, ದೇಶದಲ್ಲಿ ಅಪಾಯದ ಕರೆಗಂಟೆ ಬಾರಿಸಿದೆ.

ಆಂಗ್ಲ ಪತ್ರಿಕೆಯೊಂದಕ್ಕೆ ದೊರೆತ ಮಾಹಿತಿಯಂತೆ, ಭಾರತದ ಮತ್ತು ವಿದೇಶಿ ಗುಪ್ತಚರ ಸಂಸ್ಥೆಗಳ ಮಾಹಿತಿ ಪ್ರಕಾರ ಭಾರತದಿಂದ ಕಾಣೆಯಾದ 17 ಮಂದಿ ಐಎಸ್ ಅಥವಾ ಅದರ ಪ್ರತಿಸ್ಪರ್ಧಿ ಸಂಘಟನೆಯಾದ ಜಭಾತ್ ಅಲ್ ನುಸ್ರಾಗೆ ಸೇರ್ಪಡೆಗೊಂಡಿದ್ದಾರೆ. ಇಂಡಿಯನ್ ಮುಜಾಹಿದೀನ್ ನ 12ರಷ್ಟು ಮಂದಿಯೂ ಇಸ್ಲಾಮಿಕ್ ಸ್ಟೇಟ್ ಜತೆ   ಕೈಜೋಡಿಸಿಕೊಂಡಿದ್ದಾರೆ.

ಇದೇ ವೇಳೆ, ಉಗ್ರ ಸಂಘಟನೆ ಸೇರಿಕೊಳ್ಳಲೆಂದು ಪ್ರಯಾ-ಣಿ-ಸುತ್ತಿದ್ದ 22 ಮಂದಿಯನ್ನು ಪೊಲೀಸರು ತಡೆದಿದ್ದಾರೆ. ಇಂಡಿಯನ್ ಎಕ್ಸ್‍ಪ್ರೆಸ್ ವರದಿಗಾರರು 17 ಯುವಕರ ಮನೆಗಳಿಗೆ ಭೇಟಿಯಾಗಿ ಹಲವು ಮಾಹಿತಿ ಕಲೆಹಾಕಿದ್ದಾರೆ. ಈ ಪೈಕಿ ಒಬ್ಬ ಮಹಿಳೆಯೂ ಸೇರಿದ್ದು, ಆಕೆ ಮನೆಗೆ ವಾಪಸಾಗಿದ್ದಾಳೆ. ಇವರೆಲ್ಲರೂ ಶಿಕ್ಷಿತರಾಗಿದ್ದು, ಮಧ್ಯಮವರ್ಗಕ್ಕೆ ಸೇರಿದವರು.

ಐಎಸ್‍ಗೆ ಸೇರಿರುವವರ ಸಂಖ್ಯೆ ಕಡಿಮೆಯಾಗಿದ್ದರೂ, ದೇಶದ ಮುಸ್ಲಿಂ ಯುವಕರು ಧಾರ್ಮಿಕ ಮತ್ತು ರಾಜಕೀಯ ನಾಯಕತ್ವ ಹಾಗೂ ಹೆಚ್ಚುತ್ತಿರುವ ಕೋಮುಗಲಭೆಗಳಿಂದ ರೋಸಿ ಹೋಗಿ ಐಎಸ್‍ನತ್ತ ಆಕರ್ಷಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

SCROLL FOR NEXT