ದೇಶ

ಹವಾಮಾನ ಸಮಸ್ಯೆಗೆ ಭಾರತವೇ ಕಾರಣ

Mainashree
ನವದೆಹಲಿ: ಹವಾಮಾನ ಕುರಿತ ಪ್ಯಾರಿಸ್ ಶೃಂಗಸಭೆಯಲ್ಲಿ, ಮಾಲಿನ್ಯ ಹೊರಸೂಸುವಿಕೆ ಭಾರವನ್ನು ಭಾರತದಂತಹ ದೇಶಗಳ ಮೇಲೆ ಹಾಕುವುದು ನೈತಿಕವಾಗಿ ಸರಿಯಲ್ಲ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿ ಗಮನ ಸೆಳೆದಿದ್ದರೆ, ಇತ್ತ ನವದೆಹಲಿಯಲ್ಲಿ ಅವರದೇ ಸಂಪುಟದ ಪ್ರಮುಖ ಸಚಿವೆ ಮೇನಕಾ ಗಾಂಧಿ ವೈರುಧ್ಯ ಹೇಳಿಕೆ ನೀಡಿದ್ದಾರೆ. 
ಚೆನ್ನೈ ಮಳೆ ಅವಾಂತರ ಕುರಿತಂತೆ ಗುರುವಾರ ಪ್ರತಿಕ್ರಿಯೆ ನೀಡಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ, ಹವಾಮಾನ ಬದಲಾವಣೆಯೇ ಸಮಸ್ಯೆಗೆ ಮೂಲ ಕಾರಣವಾಗಿದ್ದು, ಈ ಜಾಗತಿಕ ಸಮಸ್ಯೆಗೆ ಭಾರತದ ಕೊಡುಗೆ ದೊಡ್ಡ ಪ್ರಮಾಣದಲ್ಲಿದೆ ಎಂದಿದ್ದಾರೆ. 
`ಪ್ರತಿ ಸಲ ಇಂಥ ಸಮಸ್ಯೆ ಎದುರಾದಾಗೆಲ್ಲ, ಪಾಶ್ಚಾತ್ಯ ದೇಶಗಳ ಕೈಗಾರೀಕರಣದಿಂದಾಗಿ ಹವಾಮಾನ ಬದಲಾಗಿದೆ ಎಂದು ದೂಷಿಸುವುದು ಸಾಮಾನ್ಯವಾಗಿದೆ. ಅವರು ಪರಿಸರ ಹಾಳುಗೆಡವಿದ್ದು 100 ವರ್ಷಗಳ ಹಿಂದೆ. ಈಗ ಭಾರತದಂಥ ದೇಶಗಳಿಂದಾಗಿ ಹವಾಮಾನ ಹಾಳಾಗುತ್ತಿದೆ ಎಂದು ಎನ್‍ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಮೇನಕಾ ಗಾಂಧಿ.
ಮಿಥೇನ್ ಉತ್ಪಾದನೆ ಹೆಚ್ಚಲು ಕಲ್ಲಿದ್ದಲು, ಪ್ರಾಣಿಗಳು ಹಾಗೂ ಭತ್ತ ಮುಖ್ಯ ಕಾರಣ ಎಂದು ವಿಶ್ಲೇಷಿಸಿರುವ ಸಚಿವೆ, ಜಗತ್ತಿನಲ್ಲಿ ಮಿಥೇನ್ ಮಾಲಿನ್ಯ ಹೆಚ್ಚಲು ಭಾರತ, ಚೀನಾ ಮತ್ತು ಬ್ರೆಜಿಲ್ ದೇಶಗಳೇ ಮುಖ್ಯ ಕಾರಣ ಎಂದಿದ್ದಾರೆ.
SCROLL FOR NEXT