ಚೆನ್ನೈ: ಜಲಪ್ರಳಯಕ್ಕೆ ತುತ್ತಾಗಿದ್ದ ಚೆನ್ನೈನಲ್ಲಿ ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಬರತೊಡಗಿದೆ. ಅಲ್ಲಿ ಈಗ ಮಳೆಯೂ ಕಡಿಮೆಯಾಗಿದೆ. ಆದರೆ ಅಲ್ಲಿನ ಜನರು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಮಳೆಯಿಂದಾಗಿ ತಮ್ಮ ಮನೆ, ಬಂಧುಗಳನ್ನು ಕಳೆದುಕೊಂಡ ಕುಟುಂಬಗಳು ಈಗ ಮಾನಸಿಕ ಸಾಂತ್ವನವನ್ನು ಬಯಸಿ ಮನಶಾಸ್ತ್ರಜ್ಞರನ್ನು ಭೇಟಿ ಮಾಡತೊಡಗಿವೆ.
ಜಲಪ್ರಳಯದ ಸಂತ್ರಸ್ತರು ಮನಶಾಸ್ತ್ರಜ್ಞರಿಗೆ ಫೋನ್ ಮಾಡಿ ಅವರ ತೊಳಲಾಟವನ್ನು ಹೇಳುತ್ತಿದ್ದಾರೆ. ತಮ್ಮ ನಷ್ಟಗಳನ್ನು ಭರಿಸಿಕೊಳ್ಳಲು ಒದ್ದಾಡುವವರು ಒಂದೆಡೆಯಾದರೆ, ಆಘಾತದಿಂದ ಹೊರಬರಲು ಆಗದೆ ಸಂಕಷ್ಟಕ್ಕೀಡಾದವರು ಒಂದೆಡೆ. ಇಂಥಾ ಜನರು ನಮ್ಮನ್ನು ಸಮೀಪಿಸಿ ಪರಿಹಾರವನ್ನು ಕೇಳುತ್ತಿದ್ದಾರೆ ಅಂತಾರೆ ಅಲ್ಲಿನ ಆಪ್ತ ಸಲಹೆಗಾರರು.
ಒಬ್ಬ ಮಹಿಳೆಯ ಮಾವ ಜಲಪ್ರಳಯದಲ್ಲಿ ಸಾವನ್ನಪ್ಪಿದ್ದರು. ಆ ಶವವನ್ನು ಎರಡು ದಿನಗಳ ಕಾಲ ಅಪಾರ್ಟ್ಮೆಂಟ್ನಲ್ಲೇ ಇರಿಸಲಾಗಿತ್ತು. ಎಕ್ಕಾಂಟುಗಲ್ ನಲ್ಲಿರುವ ಅವರ ಮನೆಗೆ ರಕ್ಷಣಾ ಕಾರ್ಯಕರ್ತರು ತಲುಪಬೇಕಾದರೆ ಎರಡು ದಿನಗಳೇ ಬೇಕಾಗಿ ಬಂತು. ನನ್ನ ಪತಿ ಮನೆಯಲ್ಲಿರಲಿಲ್ಲ. ಎರಡು ದಿನ ಶವವನ್ನು ಒಂದು ಕೊಠಡಿಯಲ್ಲಿ ಬಂದ್ ಮಾಡಿ ನಾನು ಮತ್ತು ಮಕ್ಕಳು ಅನುಭವಿಸಿದ ವೇದನೆ ನಮಗಷ್ಟೇ ಗೊತ್ತು ಎಂದು ಆಕೆ ಫೋನ್ ಮಾಡಿ ಅತ್ತಿದ್ದಳು ಅಂತಾರೆ ಓರ್ವ ಆಪ್ತಸಲಹೆಗಾರ್ತಿ.
ಆಪ್ತ ಸಲಹೆಗಾರರಿಗೆ ಬರುವ ಫೋನ್ಗಳಲ್ಲಿ ಹೆಚ್ಚಿನವು ಇಂಥದ್ದೇ ವಿಷಯಗಳಿಗೆ ಸಂಬಂಧಿಸಿದ್ದವುಗಳಾಗಿವೆ.
ಜಲಪ್ರಳಯದ ಹೊತ್ತಲ್ಲಿ ಅಲ್ಲಿನ ಜನರು ತಮ್ಮ ಅಸ್ತಿತ್ವಕ್ಕೋಸ್ಕರ ಹೋರಾಡುತ್ತಿದ್ದರು. ಮಳೆ ನಿಂತ ಮೇಲೆ ಈಗ ಅವರು ಖಿನ್ನತೆಗೊಳಗಾಗಿ ಮಾನಸಿಕ ತೊಳಲಾಟದಲ್ಲಿದ್ದಾರೆ. ಅವರಿಗೆ ಈಗ ಸಾಂತ್ವನ ಮತ್ತು ಧೈರ್ಯ ತುಂಬುವವರು ಬೇಕಾಗಿದ್ದಾರೆ. ಮಾನಸಿಕ ಸಂಘರ್ಷಗಳಿಂದ ಅವರನ್ನು ಹೊರತಂದು ಅವರಿಗೆ ಸಹಾಯ ಮಾಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಅಲ್ಲಿನ ಮನಶಾಸ್ತ್ರಜ್ಞರು ಹೇಳುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos