ನವದೆಹಲಿ: ಸ್ವತಂತ್ರ ಚಿಂತನೆ ಹೊಂದಿರುವವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲು ಸೋನಿಯಾ ಗಾಂಧಿಯವರಿಗೆ ಆಸಕ್ತಿ ಇಲ್ಲ ಎಂದು ಎನ್ ಸಿಪಿ ನೇತಾರ ಶರದ್ ಪವಾರ್ ಹೇಳಿದ್ದಾರೆ. ಇತ್ತೀಚೆಗೆ ಲೋಕಾರ್ಪಣೆಯಾದ ಲೈಫ್ ಆನ್ ಮೈ ಟೈಮ್ಸ್ -ಫ್ರಂ ದ ಗ್ರಾಸ್ ರೂಟ್ಸ್ ಆ್ಯಂಡ್ ಕಾರಿಡಾರ್ಸ್ ಆಫ್ ಪವರ್ ಎಂಬ ಪುಸ್ತಕದಲ್ಲಿ ಶರದ್ ಪವಾರ್ ಈ ವಿಷಯವನ್ನು ಉಲ್ಲೇಖಿಸಿದ್ದಾರೆ.
ತಮ್ಮ 75ನೇ ವಯಸ್ಸಿನ ಹುಟ್ಟು ಹಬ್ಬ ಆಚರಣೆ ವೇಳೆ ಸೋನಿಯಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮೊದಲಾದವರ ಉಪಸ್ಥಿತಿಯಲ್ಲಿ ಈ ಪುಸ್ತಕ ಲೋಕಾರ್ಪಣೆಯಾಗಿತ್ತು.
1991ರಲ್ಲಿ ನನ್ನ ಬದಲು ಪಿ.ವಿ ನರಸಿಂಹ ರಾವ್ ಅವರನ್ನು ಪ್ರಧಾನಿ ಮಾಡುವುದು ಒಳ್ಳೆಯದು ಎಂದು ಕೆಲವು ವ್ಯಕ್ತಿಗಳು ಸೋನಿಯಾ ಗಾಂಧಿಗೆ ಹೇಳಿದ್ದರು ಎಂದು ಪವಾರ್ ಆರೋಪಿಸಿದ್ದಾರೆ. ಸ್ವತಂತ್ರ ನಿಲುವು ಹೊಂದಿದವರನ್ನು ಪ್ರಧಾನಿಯನ್ನಾಗಿಸಲು ಗಾಂಧಿ ಕುಟುಂಬಕ್ಕೆ ಆಸಕ್ತಿ ಇರಲಿಲ್ಲ ಎಂಬುದು ಇದರಲ್ಲಿ ಸ್ಪಷ್ಟವಾಗುತ್ತಿದೆ.
ಪ್ರಧಾನಿ ಸ್ಥಾನ ನನಗೆ ಸಿಗದಂತೆ ಮಾಡಿದ್ದು ಕಾಂಗ್ರೆಸ್ನ ನೇತಾರರಾಗಿದ್ದ ದಿವಂಗತ ಅರ್ಜುನ್ ಸಿಂಗ್ ಎಂದು ಪವಾರ್ ಆರೋಪಿಸಿದ್ದಾರೆ. ಅರ್ಜುನ್ ಸಿಂಗ್ ನನ್ನ ಬದಲು ನರಸಿಂಹ ರಾವ್ ಅವರನ್ನು ಆರಿಸುವಂತೆ ಸೋನಿಯಾ ಗಾಂಧಿಗೆ ಒತ್ತಡ ಹೇರಿದ್ದರು ಎಂದು ಪುಸ್ತಕದಲ್ಲಿ ಹೇಳಲಾಗಿದೆ. ಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ಇನ್ನುಳಿದ ರಾಜ್ಯದ ಮುಖ್ಯಮಂತ್ರಿಗಳೂ ನನ್ನನ್ನು ಪ್ರಧಾನಿ ಸ್ಥಾನಕ್ಕೆ ಸೂಚಿಸಿದ್ದರು ಎಂದು ಪವಾರ್ ಹೇಳಿದ್ದಾರೆ. ನರಸಿಂಹ ರಾವ್ ಅವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ಪವಾರ್ ಕಾರ್ಯ ನಿರ್ವಹಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos