ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರು ವಿನಾಃ ಕಾರಣ ಗದ್ದಲವೆಬ್ಬಿಸಿ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಪವಿತ್ರ ಗಂಗಾ ಹಾಗೂ ಯಮುನ ನದಿಗಳ ಸ್ವಚ್ಛಯನ್ನು ನಾವು ಮಾಡುತ್ತೇವೆ. ಸಂಸತ್ತಿನ ಕೊಳೆಯನ್ನು ಯಾರು ಸ್ವಚ್ಛ ಮಾಡುತ್ತಾರೆ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ಅವರು ಪ್ರಶ್ನಿಸಿದ್ದಾರೆ.
ಗಂಗಾ ಮತ್ತು ಯಮುನಾ ನದಿ ಸ್ವಚ್ಛತೆ ಕುರಿತು ಕಾಂಗ್ರೆಸ್ ಸದಸ್ಯರು ಕೇಳಿದ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಗಂಗಾ ಹಾಗೂ ಯಮುನ ನದಿಗಳ ಸ್ವಚ್ಛತೆಯನ್ನು ನಾವು ಮಾಡುತ್ತೇವೆ. ಅದೇ ರೀತಿ ಸಂಸತ್ ನಲ್ಲಿರುವ ಕೊಳೆಯನ್ನು ಯಾರು ಸ್ವಚ್ಛ ಮಾಡ್ತಾರೆ? ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧೀ ಅವರು ಇದರ ಜವಾಬ್ದಾರಿ ತೆಗೆದುಕೊಂಡು ನಿರ್ವಹಿಸುತ್ತಾರೆ ಎಂದು ಲೇವಡಿ ಮಾಡಿದರು.
ಪ್ರತಿದಿನ ಸದನದಲ್ಲಿ ಕಾಂಗ್ರೆಸ್ ಸಂಸದರು ಒಂದಿಲ್ಲೊಂದು ವಿಚಾರವಾಗಿ ಪ್ರತಿಭಟನೆ ನಡೆಸುತ್ತಾರೆ. ಒಂದು ದಿನ ಅರುಣಾಚಲ ಪ್ರದೇಶ ಸಮಸ್ಯೆ. ಮತ್ತೊಂದು ದಿನ ದೆಹಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಚೇರಿ ಮೇಲಿನ ದಾಳಿ. ಮಗದೊಂದು ದಿನ ಮತ್ತೊಂದು ಸಮಸ್ಯೆ ಹೀಗೆ ಯಾವುದಾದರೊಂದು ಸಮಸ್ಯೆಗಳ ಬಗ್ಗೆ ಪ್ರತಿಭಟನೆ ನಡೆಸಿ ಕಲಾಪಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಇಂತ ಕೊಳೆಯನ್ನು ಯಾರು ಸ್ವಚ್ಛ ಮಾಡುತ್ತಾರೆ. ಮಾಮ(ಸ್ಪೀಕರ್) ಇದರ ಜವಾಬ್ದಾರಿಯನ್ನು ಸೋನಿಯಾ ಗಾಂಧೀ ಅವರು ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು. ಉಮಾಭಾರತಿಯವರ ಈ ಮಾತನ್ನು ಬಿಜೆಪಿ ಸಂಸದರು ಮೇಜುಕುಟ್ಟಿ ಬೆಂಬಲಿಸಿದರು.