ಮುಂಬೈ: ಕಾಂಗ್ರೆಸ್ ನ ಅಧಿನಾಯಕರಾಗಿರುವ ನೇತಾಜಿ ಜವಾಹರ್ ಲಾಲ್ ನೆಹರೂ ಹಾಗೂ ಸೋನಿಯಾ ಗಾಂಧಿಯವರನ್ನು ಟೀಕಿಸುವ ಮುಖಾಂತರ ಮಹಾರಾಷ್ಟ್ರದ ಕಾಂಗ್ರೆಸ್ ಮುಖವಾಣಿ ಪತ್ರಿಕೆ ಸೋಮವಾರ ತೀವ್ರ ಮುಜುಗರಕ್ಕೊಳಗಾಗಿದೆ.
ಕಾಂಗ್ರೆಸ್ ಪಕ್ಷದ ಮುಖವಾಣಿ 'ಕಾಂಗ್ರೆಸ್ ದರ್ಶನ್' ತನ್ನ ಡಿಸೆಂಬರ್ ಆವೃತ್ತಿಯಲ್ಲಿ ಸೋನಿಯಾ ಗಾಂಧಿ ಹಾಗೂ ದೇಶದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಅವರನ್ನು ಟೀಕಿಸುವ ಮುಖಾಂತರ ತೀವ್ರ ಮುಜುಗರಕ್ಕೊಳಗಾಗಿದೆ.
ಮುಖವಾಣಿಯಲ್ಲಿ ಸೋನಿಯಾ ಗಾಂಧಿಯವರ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿರುವ ಪತ್ರಿಕೆಯು ಸೋನಿಯಾ ಅವರ ತಂದೆ ಇಟಲಿಯ ಫ್ಯಾಸಿಸ್ಟ್ ಪಕ್ಷದ ಸದಸ್ಯರಾಗಿದ್ದರು ಎಂದು ಹೇಳಿಕೊಂಡಿರುವ ಪತ್ರಿಕೆ, ಸೋನಿಯಾ ಗಾಂಧಿ ಅವರು 1997ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೂ ಸರ್ಕಾರ ರಚಿಸುವಲ್ಲಿ ವಿಫಲರಾಗಿದ್ದಾರೆಂದು ಹೇಳಿಕೊಂಡಿದೆ.
ಇದರಂತೆ ನೆಹರೂ ಅವರ ಬಗ್ಗೆಯೂ ಟೀಕೆ ವ್ಯಕ್ತಪಡಿಸಿರುವ ಪತ್ರಿಕೆ ಕಾಶ್ಮೀರ ವಿಚಾರಕ್ಕೆ ಸಂಬಂದಿಸಿದಂತೆ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಸಲಹೆಗಳನ್ನು ಪರಿಗಣಿಸಬೇಕಿತ್ತು ಎಂದು ಹೇಳಿದೆ. ಅಲ್ಲದೆ, ನೆಹರೂ ಅವರ ಚೀನಾ, ಟಿಬೆಟ್, ನೇಪಾಳ ನೀತಿಗಳ ಕುರಿತಂತೆಯೂ ಲೇಖನದಲ್ಲಿ ಟೀಕೆ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಪಕ್ಷ ಇಂದು 131ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತಿದ್ದು. ಇಂದೇ ಮಹಾರಾಷ್ಟ್ರದ ಕಾಂಗ್ರೆಸ್ ಮುಖವಾಣಿ ತನ್ನ ಬಗ್ಗೆಯೇ ಈ ರೀತಿಯ ಲೇಖನ ಪ್ರಕಟಿಸಿರುವುದು ತೀವ್ರ ಮುಜುಗರಕ್ಕೆ ಕಾರಣವಾಗಿದೆ.
ಪ್ರಕಟಣೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು, ಲೇಖನವನ್ನು ನಾನಿನ್ನೂ ಓದಿಲ್ಲ. ಹೀಗಾಗಿ ಈ ಬಗ್ಗೆ ಹೇಳಿಕೆ ನೀಡಲು ಸಾಧ್ಯವಿಲ್ಲ. ನಿಜವಾಗಲೂ ಈ ರೀತಿಯ ಲೇಖನ ಪ್ರಕಟಣೆಯಾಗಿದ್ದೇ ಆದರೆ, ಪಕ್ಷದ ವರಿಷ್ಠರು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ. ಲೇಖನ ಪ್ರಕಟವಾಗಿದ್ದರೆ ನಿಜಕ್ಕೂ ತಪ್ಪು. ಈ ಬಗ್ಗೆ ಅಧಿಕೃತವಾಗಿ ಪಕ್ಷ ಶೀಘ್ರದಲ್ಲೇ ಹೇಳಿಕೆ ನೀಡಲಿದೆ ಎಂದು ಹೇಳಿದ್ದಾರೆ.
ಹಿರಿಯ ನಾಯಕ ರಾಜ್ ಬಬ್ಬರ್ ಮಾತನಾಡಿ, ಲೇಖನ ಕುರಿತಂತೆ ಪಕ್ಷ ಗಂಭೀರವಾಗಿ ಪರಿಗಣಿಸಲಿದೆ. ಲೇಖನವನ್ನು ಯಾವ ಆಧಾರದ ಬರೆಯಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ಈ ರೀತಿಯಾಗಿ ಅಭಿಪ್ರಾಯ ವ್ಯಕ್ತಪಡಿಸುವುದು ಹಾಗೂ ಈ ರೀತಿಯ ಭಾಷೆಯನ್ನು ಬಳಸುವುದು ನಿಜಕ್ಕೂ ಸರಿಯಾದುದ್ದಲ್ಲ ಎಂದು ಹೇಳಿದ್ದಾರೆ.