ದೇಶ

ಶರಣಾಗತಿಗೆ ದಾವೂದ್ ಷರತ್ತು ಒಡ್ಡಿದ್ದ: ಶರದ್ ಪವಾರ್

Mainashree

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹ್ರೀಂ ಶರಣಾಗಲು ಯತ್ನಿಸಿದ್ದನು, ಆದರೆ ಅದಕ್ಕೆ ಅಂದಿನ ಮುಖ್ಯಮಂತ್ರಿಯಾಗಿದ್ದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡ ಶರದ್ ಪವಾರ್ ಅವರು ನಿರಾಕರಿಸಿದ್ರು ಎಂಬ ರಾಮ್ ಜೇಠ್ಮಲಾನಿ ಆರೋಪಕ್ಕೆ ತಿರುಗೇಟು ನೀಡಿರುವ ಎನ್ ಸಿಪಿ ನಾಯಕ ಶರದ್ ಪವಾರ್, ಅದು ಕಾರ್ಯಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಜೇಠ್ಮಮಲಾನಿ ನೀಡಿರುವ ಹೇಳಿಕೆ ನಿಜ. ಆದರೆ, ಅಂದಿನ ಪರಿಸ್ಥಿತಿಯಲ್ಲಿ ಆತನ ಶರಣಾಗತಿಗೆ ಅವಕಾಶವಿರಲಿಲ್ಲ. ಶರಣಾಗಲು ದಾವೂದ್ ಕೆಲವು ಷರತ್ತು ವಿಧಿಸಿದ್ದನು. ಶರಣಾಗಲು ಭಾರತಕ್ಕೆ ಬಂದರೆ ನನ್ನನ್ನು ಬಂಧಿಸಬಾರದು ಸೇರಿದಂತೆ ಅನೇಕ ಷರತ್ತು ವಿಧಿಸಿದ್ದನು. ಆದರೆ, ಒಬ್ಬ ವ್ಯಕ್ತಿಯ ಮೇಲೆ ಅನೇಕ ಪ್ರಕರಣಗಳು ದಾಖಲಾಗಿದ್ದರೇ, ಆತನನ್ನು ಬಂಧಿಸದೇ ಬಿಡಲು ಹೇಗೆ ಸಾಧ್ಯ. ಹಾಗಾಗಿ, ದಾವೂದ್ ಷರತ್ತನ್ನು ತಿರಸ್ಕರಿಸಿದೆವು ಎಂದು ಶರದ್ ಪವಾರ್ ತಿಳಿಸಿದ್ದಾರೆ.

ದಾವೂದ್ ಸಹಚರ ಛೋಟಾ ಶಕೀಲ್ ನನ್ನು ಲಂಡನ್ ನಲ್ಲಿ ಭೇಟಿಯಾಗಿದ್ದೆ ಎಂಬ ಪತ್ರಿಕಾ ವರದಿಯನ್ನು ತಿರಸ್ಕರಿಸಿದ್ದ ರಾಮ್ ಜೇಠ್ಮಲಾನಿ, ದಾವೂದ್ ಭಾರತಕ್ಕೆ ಬಂದು ಶರಣಾಗಲು ಬಯಸಿದ್ದ, ಆದರೆ ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಶರದ್ ಪವಾರ್ ಆತನ ಬೇಡಿಕೆ ಸಂಬಂಧ ಯಾವುದೇ ನಿರ್ಧಾರಕ್ಕೆ ಬರಲಿಲ್ಲ. ಈ ನಿರ್ಧಾರ ಕೇವಲ  ಶರದ್ ಪವಾರ್ ಅವರದಲ್ಲ, ಯುಪಿಎ ಸರ್ಕಾರದ ಪಾಲು ಇತ್ತು ಎಂದು ಅವರು ಆರೋಪಿಸಿದ್ದರು.

1993 ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ತಾನು ಭಾಗಿಯಾಗಿಲ್ಲ ಎಂದು ಹೇಳಿದ ದಾವೂದ್, ತಾನು ಶರಣಾದ ನಂತರ ಭಾರತದ ಪೊಲೀಸ್ ಅಧಿಕಾರಿಗಳು ವಿಚಾರಣೆ ವೇಳೆ ತನಗೆ ಥರ್ಡ್ ಡಿಗ್ರಿ ಟಾರ್ಚರ್ ನೀಡುವುದಿಲ್ಲ ಎಂಬ ಭರವಸೆ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದ. ಆದರೆ ಭಾರತ ಸರ್ಕಾರ ಅವನ ಶರಣಾಗತಿಗೆ ಅವಕಾಶ ನೀಡಲಿಲ್ಲ ಎಂದು ರಾಮ್ ಜೇಠ್ಮಲಾನಿ ಹೇಳಿದ್ದರು.

SCROLL FOR NEXT