ಝಾನ್ಸಿ: ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸಲು 2016 ರಲ್ಲಿ ಪಾಕಿಸ್ತಾನಕ್ಕೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ವಾಪಸ್ಸಾಗುವಾಗ ತಮ್ಮದೇ ವಿಮಾನದಲ್ಲಿ ಭಾರತಕ್ಕೆ ಬೇಕಾಗಿರುವ ಉಗ್ರರನ್ನು ಕರೆತರಲಿ ಎಂದು ಉತ್ತರ ಪ್ರದೇಶ ಸಚಿವ ಆಜಂ ಖಾನ್ ಹೇಳಿದ್ದಾರೆ.
ಮುಂಬೈ ದಾಳಿ ರೂವಾರಿ ಲಖ್ವಿಯೊಂದಿಗೆ ಕಂದಹಾರ್ ಗೆ ತೆರಳಿದ ಉಗ್ರರನ್ನು ಮೋದಿ ವಾಪಸ್ ಕರೆ ತರಲಿ ಎಂದು ಆಜಂ ಖಾನ್ ಪ್ರಧಾನಿ ನರೇಂದ್ರ ಮೋದಿಗೆ ಸಲಹೆ ನೀಡಿದ್ದಾರೆ. ಮೌಲಾನಾ ಮಸೂದ್ ಅಜರ್ ಸೇರಿದಂತೆ ಹಲವು ಉಗ್ರರನ್ನು ಭಾರತ ಸರ್ಕಾರವೇ ವಿಶೇಷ ವಿಮಾನದಲ್ಲಿ ಕಂದಹಾರ್ ಗೆ ಕಳಿಸಿತ್ತು. 155 ಪ್ರಯಾಣಿಕರನ್ನು ಉಗ್ರರು ಒತ್ತೆಯಾಳುಗಳಾಗಿಟ್ಟುಕೊಂಡಿದ್ದರಿಂದ ಅಂದಿನ ಸರ್ಕಾರ ಈ ಕ್ರಮ ಕೈಗೊಂಡಿತ್ತು. ಈಗ ಆ ಉಗ್ರರನ್ನು ಮೋದಿ ವಾಪಸ್ ಕರೆತರಬೇಕೆಂದು ಆಜಂ ಖಾನ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ನಡೆದ ಭಾರತ- ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಮಾತುಕತೆ ವೇಳೆ 26 /11 ರ ಮುಂಬೈ ದಾಳಿ ರೂವಾರಿ ಲಖ್ವಿ, ಜೆಯುಡಿ ಉಗ್ರ ಸಂಘಟನೆಯ ಭಯೋತ್ಪಾದಕ ಹಫೀಜ್ ಸಯೀದ್ ನನ್ನು ಭಾರತಕ್ಕೆ ಒಪ್ಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಆಜಂ ಖಾನ್ ಭಾರತಕ್ಕೆ ಬೇಕಾಗಿರುವ ಉಗ್ರರನ್ನು ಮೋದಿಯೇ ತಮ್ಮ ವಿಮಾನದಲ್ಲಿ ಕರೆತರ್ಲಿ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.