ದೇಶ

ನಾನು ಬರೆದಿದ್ದನ್ನು ಸಮರ್ಥಿಸಿಕೊಳ್ಳುತ್ತೇನೆ; ವ್ಯಾಪಂ ಬಗ್ಗೆ ಶಾಂತಕುಮಾರ್

Guruprasad Narayana

ನವದೆಹಲಿ: ವ್ಯಾಪಂ ಹಗರಣ ಬಿಜೆಪಿ ಪಕ್ಷದ ಹೆಸರಿಗೆ ಮಸಿಬಳಿದಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರಿಗೆ ಬರೆದ ಪತ್ರವನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ ಎಂದು ಮಂಗಳವಾರ ಹಿಮಾಚಲಪ್ರದೇಶದ ಮಾಜಿ ಮುಖ್ಯಮಂತ್ರಿ ಶಾಂತಕುಮಾರ್ ತಿಳಿಸಿದ್ದಾರೆ.

"ಭಾರತೀಯ ಜನತಾ ಪಕ್ಷದ ಪಯಣ ಸುಧೀರ್ಘವಾದದ್ದು ಮತ್ತು ಈ ಸಮಯದಲ್ಲಿ ಪಕ್ಷ ಬಹಳಷ್ಟು ಸಾಧಿಸಿದೆ ಮತ್ತು ಸದಸ್ಯರಿಗೆ ಹೆಮ್ಮೆ ತಂದಿದೆ. ಆದರೆ ಇಂತಹ ಘಟನೆಗಳು ನಡೆದರೆ ಇದು ಪಕ್ಷಕ್ಕೆ ಮಸಿ ಬಳಿದು ಸದಸ್ಯರ ಆತ್ಮವಿಶ್ವಾಸವನ್ನು ಕುಂದಿಸುತ್ತದೆ" ಎಂದು ವ್ಯಾಪಂ ಹಗರಣದ ಬಗ್ಗೆ ವರದಿಗಾರರೊಂದಿಗೆ ಶಾಂತಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

"ಪತ್ರದಲ್ಲಿ ನನ್ನ ನಿಲುವುಗಳನ್ನು ವ್ಯಕ್ತಪಡಿಸಿದ್ದೇನೆ ಮತ್ತು ನಾನು ಬರೆದಿರುವುದಕ್ಕೆ ಬದ್ಧನಾಗಿದ್ದೇನೆ" ಎಂದು ಅವರು ಹೇಳಿದ್ದಾರೆ.

ಷಾ ಅವರಿಗೆ ಹಿಂದಿಯಲ್ಲಿ ಬರೆದ ಪತ್ರವನ್ನು ತಮ್ಮ ಫೇಸ್ಬುಕ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇಂತಹ ಹಗರಣಗಳು ಪಕ್ಷದ ಸದಸ್ಯರನ್ನು ತಲೆ ತಗ್ಗಿಸುವಂತೆ ಮಾಡಿವೆ ಎಂದು ಅವರು ಹೇಳಿದ್ದರು.

ಬಿಜೆಪಿ ಆಡಳಿತದ ಮಧ್ಯಪ್ರದೇಶದ ಸರ್ಕಾರಿ ನೇಮಕಾತಿಗಳಲ್ಲಿ ಆಗಿರುವ ವ್ಯಾಪಕ ಭ್ರಷ್ಟಾಚಾರದ ತನಿಖೆಯನ್ನು ಸಿ ಬಿ ಐ ನಡೆಸುತ್ತಿದೆ. ಈ ಹಗರಣಕ್ಕೆ ಸಂಬಧಪಟ್ಟಂತೆ ಇಲ್ಲಿಯವರೆಗೆ ೪೫ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.

SCROLL FOR NEXT