ನವದೆಹಲಿ: ಹಲವು ಅಪರಾಧ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲ್ಯಾಡನ್ ನಂತೆಯೇ ಮುಕ್ತವಾಗಿರುವ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದಾನೆ.
ಯುಎಸ್ ನ ಭಯೋತ್ಪಾದನಾ ನಿಗ್ರಹ ತಜ್ಞರ ಹೇಳಿಕೆಗಳನ್ನೊಳಗೊಂಡ ಸಂಡೆ ಗಾರ್ಡಿಯನ್ ಪತ್ರಿಕೆ ವರದಿ ಪ್ರಕಾರ, ದಾವೂದ್ ಇಬ್ರಾಹಿಂ ಪೇಶಾವರ ಸಿಂಧ್(ಹೈದರಾಬಾದ್) ಲಾಹೋರ್ ನಲ್ಲಿರುವ ತನ್ನ ಮನೆಗಳಿಗೆ ಓಡಾಡಿಕೊಂಡಿರುತ್ತಾನೆ. ಅಷ್ಟೇ ಅಲ್ಲದೇ ತಲೆ ಮರೆಸಿಕೊಂಡಿರುವ ಈ ಮಾಫಿಯಾ ಡಾನ್ ಪಾಕಿಸ್ತಾನ ಹಾಗೂ ಭಾರತದಲ್ಲಿರುವ ತನ್ನ ಕುಟುಂಬ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾನೆ.
ಮತ್ತೊಂದು ಆಘಾತಕಾರಿ ಅಂಶವೆಂದರೆ, 26 /11 ರ ಮುಂಬೈ ದಾಳಿ ನಡೆಯುವವರೆಗೆ ಭಾರತದ ರಾಜಕಾರಣಿಗಳು ಅಂದರೆ ಎನ್.ಡಿ.ಎಗೆ ಸೇರಿದ ಇಬ್ಬರು ಹಾಗೂ ಯುಪಿಎ ಗೆ ಸೇರಿದ 4 ರಾಜಕಾರಣಿಗಳು ದಾವೂದ್ ನೊಂದಿಗೆ ಸಂಪರ್ಕದಲ್ಲಿದ್ದರು ಎಂದು ವರದಿ ಸ್ಫೋಟಕ ಮಾಹಿತಿ ಬಹಿರಂಗಗೊಳಿಸಿದೆ. ದಾವೂದ್ ಸಂಪರ್ಕದಲ್ಲಿದ್ದ ಭಾರತದ 6 ಜನ ರಾಜಕಾರಣಿಗಳು 26 / 11 ರ ದಾಳಿ ನಂತರ ಆತನೊಂದಿಗೆ ಸಂಪರ್ಕ ಕಡಿದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ದಾವೂದ್ ಗೆ ಮುಂಬೈ ಪೊಲೀಸ್ ಹಾಗೂ ರಾಜ್ಯ ರಾಜಕಾರಣಿಗಳ ಜಾಲದ ಸಹಾಯವಿಲ್ಲದ್ದೇ 26 /11 ರ ದಾಳಿ ಯಶಸ್ವಿಯಾಗಳು ಸಾಧ್ಯಯ್ವಿರಲಿಲ್ಲ ಎಂದು ಹೇಳಿರುವ ವರದಿ, ದಾವೂದ್ ನೊಂದಿಗೆ ಸಂಪರ್ಕ ಹೊಂದಿರುವ ಮಾಹಿತಿ ಬಯಲಾಗುವ ಸಾಧ್ಯತೆಯಿಂದ ಬೆದರಿದ್ದ ರಾಜಕಾರಣಿಗಳು 26 /11 ದಾಳಿಯಲ್ಲಿ ಸ್ಥಳೀಯರ ಕೈವಾಡ ಇರುವುದರ ದೃಷ್ಟಿಕೋನದಲ್ಲಿ ತನಿಖೆ ನಡೆಯದಂತೆ ತಡೆದರು ಎಂದು ಆರೋಪಿಸಿದೆ. ಇದರ ಪರಿಣಾಮ ತನಿಖೆ ಅಜ್ಮಲ್ ಕಸಬ್ ಹಾಗೂ ಆತನ ಪಾಕಿಸ್ತಾನದ ಸಂಪರ್ಕಗಳ ಬಗ್ಗೆಯೇ ಹೆಚ್ಚು ಕೇಂದ್ರೀಕೃತವಾಯಿತು.
ದಾಳಿ ನಡೆದ ತಾಜ್ ಹೋಟೆಲ್ ನ ಆಂತರಿಕ ವಿನ್ಯಾಸ ಹಾಗೂ ಕೆಲಸದ ಅವಧಿ ಬಗ್ಗೆ ಪಾಕಿಸ್ತಾನಿ ಐಎಎಸ್ಐ ಗೆ ಮಾಹಿತಿ ನೀಡಿದ್ದು ಭಾರತದಲ್ಲಿನ ಜಾಲ ಎಂಬುದನ್ನು ನಂಬದಂತೆ ತನಿಖಾಧಿಕಾರಿಗಳಿಗೆ ಸೂಚನೆ ನಿಡಲಾಗಿತ್ತು ಎಂದು ವರದಿ ತಿಳಿಸಿದೆ. ದಾವೂದ್ ಇಬ್ರಾಹಿಂ ಗೆ ವಿದೇಶಗಳಿಗೆ ತೆರಳಲು ಅನುಕೂಲವಾಗುವಂತೆ ಪಾಕಿಸ್ತಾನದ ಐ.ಎಸ್.ಐ ಆತನ ಹೊಸ ಗುರುತನ್ನು ನೀಡಿದೆ. ಇದರಿಂದಾಗಿ ದಾವೂದ್ ಇಬ್ರಾಹಿಂ ದಕ್ಷಿಣ ಆಫ್ರಿಕಾ, ಮಲೇಷಿಯಾ, ಥಾಯ್ ಲ್ಯಾಂಡ್ , ಹಾಂಕ್ ಕಾಂಗ್, ದುಬೈಗೆ ಭೇಟಿ ನೀಡಲು ಸಾಧ್ಯವಾಗುತ್ತಿದೆ.
ಎನ್.ಡಿ.ಎ ಸರ್ಕಾರ ದಾವೂದ್ ನ್ನು ಬಂಧಿಸಲು ಪಣತೊಟ್ಟಿದ್ದು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಮ್ಮ ಅವಧಿ ಮುಕ್ತಾಯವಾಗುವುದರೊಳಗೆ ದಾವೂದ್ ನನ್ನು ಬಂಧಿಸಿ ಭಾರತಕ್ಕೆ ಕರೆತರುವುದಾಗಿ ಪ್ರಧಾನಿ ಮೋದಿ ಅಮೇರಿಕಾ ಭೇಟಿ ವೇಳೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.