ದೇಶ

ಶವಾಸನ ಮಾಡುವಾಗ ಗಾಢ ನಿದ್ದೆಗೆ ಜಾರಿದ ರೈಲ್ವೆ ಸಚಿವ ಸುರೇಶ್ ಪ್ರಭು

ನವದೆಹಲಿ: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೇಶದೆಲ್ಲೆಡೆ ಸಾಮಾನ್ಯ ಜನರು, ಸಂಸದರು, ಪ್ರಧಾನಮಂತ್ರಿಗಳೆಲ್ಲರೂ ಎಲ್ಲಾ ಕೆಲಸಗಳನ್ನು ಮರೆತು ಯೋಗ ಮಾಡಿ ಮನಸ್ಸು ಶುದ್ಧ ಮಾಡಿಕೊಳ್ಳುವುದರಲ್ಲಿ ತೊಡಗಿದ್ದರೆ, ಇತ್ತ ಕೇಂದ್ರ ರೈಲ್ವೆ ಸಚಿವ ಯೋಗಮಾಡುವ ನೆಪದಲ್ಲಿ ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬಂತೆ ಶವಾಸನ ಮಾಡುತ್ತಿದ್ದಾಗ ಗಾಢ ನಿದ್ದೆಗೆ ಜಾರಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಜೂನ್.21 ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಕೊಚ್ಚಿಗೆ ತೆರಳಿದ್ದರು. ಕೊಚ್ಚಿಯ ಸ್ಟೇಡಿಯಂ ಒಂದರಲ್ಲಿ ಯೋಗ ದಿನವನ್ನು ಆಯೋಜಿಸಲಾಗಿತ್ತು. ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುರೇಶ್ ಪ್ರಭು ಅವರು ಕೆಲವು ಯೋಗಸಾನಗಳನ್ನು ಮಾಡಿದ್ದರು. ಈ ವೇಳೆ ಯೋಗದ ಹಲವು ಭಾಗಗಳಲ್ಲಿ ಒಂದಾದ ಶವಾಸನವನ್ನು ಮಾಡಿಸಲಾಯಿತು. ಆದರೆ, ಯೋಗದ ಎಲ್ಲಾ ಆಸನಗಳಿಗಿಂತ ಶವಾಸನವನ್ನು ಗಂಭೀರವಾಗಿ ಪರಿಗಣಿಸಿದ್ದ ಸುರೇಶ್ ಪ್ರಭು ಅವರು ಶವಾಸನವನ್ನು ಮಾಡುತ್ತಲೇ ಇದ್ದಕ್ಕಿದ್ದಂತೆ ಗಾಢನಿದ್ದೆಗೆ ಜಾರಿದ್ದಾರೆ. ಎಷ್ಟು ಹೊತ್ತಾದರೂ ಸುರೇಶ್ ಪ್ರಭು ಅವರು ಏಳದಿರುವುದನ್ನು ಕಂಡ ತರಬೇತುದಾರರೊಬ್ಬರು ನಂತರ ಅವರನ್ನು ಎಬ್ಬಿಸಿದ್ದಾರೆ.

ಸುರೇಶ್ ಪ್ರಭು ಅವರು ನಿದ್ರೆಗೆ ಜಾರಿರುವ ಈ ಸುದ್ದಿಯು ಹಲವು ಪ್ರಾದೇಶಿಕ ಪತ್ರಿಕೆಗಳು ಸೇರಿದಂತೆ ಮಲೆಯಾಳಂನ ಮನೋರಮಾ ಪತ್ರಿಕೆಯಲ್ಲೂ ಕೂಡ ಪ್ರಕಟಗೊಂಡಿದ್ದವು. ಈದೀಗ ಈ ಸುದ್ದಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

SCROLL FOR NEXT