ನವದೆಹಲಿ: ಚೆನ್ನೈನ ತಮ್ಮ ಬೋಟ್ ಹೌಸ್ ಮನೆಯಲ್ಲಿ ಅಕ್ರಮವಾಗಿ ಬಿಎಸ್ಎನ್ಎಲ್ ಸಂಸ್ಥೆಯ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡ ಹಗರಣಕ್ಕೆ ಸಂಬಂಧಿಸಿದಂತೆಮಾಜಿ ದೂರಸಂಪರ್ಕ ಖಾತೆ ಸಚಿವ ದಯಾನಿಧಿ ಮಾರನ್ ಅವರನ್ನು ಸಿಬಿಐ ಬುಧವಾರ ತೀವ್ರ ವಿಚಾರಣೆಗೆ ಒಳಪಡಿಸಿದೆ.
ಸಿಬಿಐನ ವಿಶೇಷ ಕಾರ್ಯಪಡೆ ಹಗರಣದ ತನಿಖೆ ನಡೆಸುತ್ತಿದ್ದು, ಸಿಬಿಐನ ಕೇಂದ್ರ ಕಚೇರಿಯಲ್ಲಿ ಇಂದು ಮಾರನ್ ಅವರನ್ನು ವಿಚಾರಣೆ ನಡೆಸುತ್ತಿದೆ.
ಈ ಬಗ್ಗೆ ಇಂಡಿಯನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯಿಸಿರುವ ಸಿಬಿಐನ ಹಿರಿಯ ಅಧಿಕಾರಿ, ಮಾರನ್ ಅವರು ಇಂದು ಬೆಳಗ್ಗೆ 11 ಗಂಟೆಯ ನಮ್ಮ ಕಚೇರಿಗೆ ಆಗಮಿಸಿದ್ದು, ವಿಚಾರಣೆ ನಡೆಯುತ್ತಿದೆ. ಅಗತ್ಯ ಬಿದ್ದರೆ ನಾಳೆಯೂ ವಿಚಾರಣೆ ಮುಂದೂವರೆಸಲಾಗುವುದು ಎಂದು ತಿಳಿಸಿದ್ದಾರೆ.
ಮಾರನ್ ಅವರು ತಮ್ಮ ಒಡೆತನದ ಸನ್ ಟಿವಿಯ ಕಾರ್ಯಕ್ರಮಗಳ ವೇಗದ ಪ್ರಸಾರಕ್ಕಾಗಿ ಬಿಎಸ್ಎನ್ಎಲ್ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಂಡದ್ದನ್ನು ಹಾಗು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆಗ ೪೪೦ ಕೋಟಿ ನಷ್ಟ ತಂದೊಡ್ಡಿದ್ದ ಹಗರಣವನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಬಯಲಿಗೆಳೆದಿತ್ತು.
ಖ್ಯಾತ ತನಿಖಾ ಪತ್ರಕರ್ತ ಮತ್ತು ಅಂಕಣಕಾರ ಎಸ್ ಗುರುಮೂರ್ತಿ ಈ ಹಗರಣವನ್ನು ಮೊದಲ ಬಾರಿಗೆ ೨೦೧೧ರಲ್ಲಿ ಬಯಲಿಗೆಳೆದಿದ್ದರು. ಸನ್ ಟಿವಿ ಗೆ ಉಪಯೋಗವಾಗುವಂತೆ ಬಿಎಸ್ಎನ್ಎಲ್ ಪ್ರಧಾನ ನಿರ್ವಾಹಕ ಹೇಗೆ ದಯಾನಿಧಿ ಮಾರನ್ ಅವರಿಗೆ ಸಹಾಯ ಮಾಡಿದ್ದರು ಎಂದು ಎಕ್ಸ್ ಪ್ರೆಸ್ ನಲ್ಲಿ ಗುರುಮೂರ್ತಿ ಸರಣಿ ಲೇಖನಗಳನ್ನು ಬರೆದು, ಮಾರನ್ ಅವರ ಹಗರಣಗಳನ್ನು ಬೆತ್ತಲೆ ಮಾಡಿದ್ದರು.