ಎಂಎಂ ಕಲಬುರ್ಗಿ-ನರೇಂದ್ರ ದಾಭೋಲ್ಕರ್-ಗೋವಿಂದ ಪನ್ಸಾರೆ
ನವದೆಹಲಿ: ಗುಂಡೇಟಿಗೆ ಬಲಿಯಾದ ಸಾಹಿತಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ ಮತ್ತು ಎಂಎಂ ಕಲಬುರ್ಗಿ ಅವರ ಕುಟುಂಬ ಸದಸ್ಯರು ನ್ಯಾಯಕ್ಕಾಗಿ ಒಟ್ಟುಗೂಡಿದ್ದಾರೆ.
ಹಿಂಸಾಚಾರದ ವಿರುದ್ಧ ಧನಿ ಎತ್ತಿರುವ ಈ ಮೂವರು ಸಾಹಿತಿಗಳ ಕುಟುಂಬ ತಮಗೆ ನ್ಯಾಯಾ ಒದಗಿಸಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ನವದೆಹಲಿಯಲ್ಲಿ ಸಾಹಿತಿಗಳ ಹತ್ಯೆಗೆ ವಿರೋಧಿಸಿ ಸಾಹಿತಿಗಳು, ಕಲಾವಿದರು ಸಭೆ ಸೇರಿದ್ದರು. ಸಭೆಯಲ್ಲಿ ಮಾತನಾಡಿದ ಗೋವಿಂದ ಪನ್ಸಾರೆ ಅವರ ಸೊಸೆ ಮೇಘ ಪನ್ಸಾರೆ, ಸಾಹಿತಿಗಳಿಗೆ ಗುಂಡು ಹಾರಿಸಿದವರನ್ನು ಕೂಡಲೇ ಬಂಧಿಸಿ ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
ನ್ಯಾಯಕ್ಕಾಗಿ ನಾವು ಹೈಕೋರ್ಟ್ ಮೆಟ್ಟಿಲೇರುತ್ತೇವೆ. ನ್ಯಾಯಾಲಯದ ಆದೇಶದ ಮೇರೆಗೆ ತನಿಖೆಯಾಗಬೇಕಿದೆ. ಪನ್ಸಾರೆ ಅವರ ಕೊಲೆ ಪ್ರಕರಣದಲ್ಲಿ ಈಗ ಬಂಧಿತನಾಗಿರುವ ಆರೋಪಿ ಬಗ್ಗೆ ಪೂರ್ಣ ತನಿಖೆಯಾಗಬೇಕು. ಅಷ್ಟೇ ಅಲ್ಲದೇ, ನಾವೆಲ್ಲರೂ ಒಂದಾಗಿ ಈ ಹಿಂಸಾಚಾರದ ವಿರುದ್ಧ ಧನಿ ಎತ್ತಬೇಕಿದೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು. ಸಾಹಿತಿಗಳ ಕುಟುಂಬಕ್ಕೆ ಸರ್ಕಾರ ನ್ಯಾಯಾ ಒದಗಿಸಬೇಕು ಎಂದು ಅವರು ಹೇಳಿದ್ದಾರೆ.
ಶ್ರೇಷ್ಠ ಸಾಹಿತಿ ಹಾಗೂ ಸಂಶೋಧಕರನ್ನು ಹತ್ಯೆ ಮಾಡುವುದು ಇತ್ತೀಚಿನ ಒಂದು ಅಪಾಯಕಾರಿ ಟ್ರೆಂಡ್ ಆಗಿದೆ, ಅದು ಮಹಾರಾಷ್ಟ್ರದಲ್ಲಿ ಮಾತ್ರ ಇದೆ ಅಂದುಕೊಂಡಿದ್ದೆವು. ಆದರೆ ಅದು ಕರ್ನಾಟಕಕ್ಕೂ ಹರಡಿರುವುದು ಕಳವಳವನ್ನುಂಟುಮಾಡಿದೆ ಎಂದಿದ್ದಾರೆ.
ದಾಭೋಲ್ಕರ್ ಹತ್ಯೆಯಾಗಿ 2 ವರ್ಷ ಹಾಗೂ ಪನ್ಸಾರೆ ಹತ್ಯೆಯಾಗಿ 7 ತಿಂಗಳು ಕಳೆದರೂ ಹಂತಕರ ಪತ್ತೆ ಆಗಿಲ್ಲ. ಡಾ ಕಲಬುರ್ಗಿ ಅವರ ಹತ್ಯೆ ಪ್ರಕರಣಕ್ಕೂ ಇದೇ ಗತಿ ಆಗುವಂತಿದೆ. ಮೂರು ಪ್ರಕರಣದಲ್ಲೂ ತನಿಖೆ ಚುರುಕುಗೊಳಿಸಿ ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.