ನವದೆಹಲಿ: ಶುಕ್ರವಾರ ಮುಂಜಾನೆ ಬೆಳಗ್ಗೆ 5.30ಕ್ಕೆ ದೆಹಲಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಕಾದು ಕುಳಿತಿದ್ದರು. ಭೂಗತಲೋಕದ ಡಾನ್ ಛೋಟಾ ರಾಜನ್ ಬರುವುದನ್ನೇ ಕಾದು ಕುಳಿತಿದ್ದ ಪತ್ರಕರ್ತರಿಗೆ ಸ್ಫೋಟಕ ಸುದ್ದಿ ಬಿತ್ತರಿಸುವ ತವಕ. ಹಿಂದಿನ ರಾತ್ರಿಯೇ ನಿದ್ದೆಯಿಲ್ಲದೆ ಕಾದು ಕುಳಿತು ಛೋಟಾ ರಾಜನ್ ನ ಆಗಮನದ ಸುದ್ದಿ, ಫೋಟೋ ತೆಗೆಯಲು ಅವರೆಲ್ಲರೂ ಕಾತರರಾಗಿದ್ದರು.
ಇಂಡೋನೇಷ್ಯಾದಿಂದ ಛೋಟಾ ರಾಜನ್ ಅವರನ್ನು ಬಿಗಿ ಭದ್ರತೆಯೊಂದಿಗೆ ಸಿಬಿಐ ಅಧಿಕಾರಿಗಳು, ಮುಂಬೈ ಪೊಲೀಸ್, ದೆಹಲಿ ಪೊಲೀಸ್ ವಿಶೇಷ ತಂಡ ವಿಶೇಷ ವಿಮಾನದಲ್ಲಿ ಕರೆತಂದಿತ್ತು. ವಿಮಾನ ಬಂದಿಳಿದೊಡನೆ ಬಿಗಿ ಭದ್ರತೆಯಿಂದಿರುವ ಕಾರಿನಲ್ಲಿ ರಾಜನ್ ಅವರನ್ನು ಕರೆತರುತ್ತಿದ್ದಾರೆ ಎಂದು ಪತ್ರಕರ್ತರೆಲ್ಲಾ ಆ ಕಾರನ್ನು ಹಿಂಬಾಲಿಸತೊಡಗಿದರು. ಹಾಗೆ ಹಿಂಬಾಲಿಸುತ್ತಿರುವಾಗ ಮಧ್ಯೆ ಅವರಲ್ಲಿ ಕೆಲವರಿಗೆ ಸಂದೇಹ ಬಂತು. ಹೌದು ಪತ್ರಕರ್ತರು ಹಿಂಬಾಲಿಸಿದ್ದು ಖೋಟಾ ರಾಜನ್ ರನ್ನು! ಅಂದರೆ ಪತ್ರಕರ್ತರ ಕಣ್ತಪ್ಪಿಸಿ ಛೋಟಾ ರಾಜನ್ ನ್ನು ಸಿಬಿಐ ಪ್ರಧಾನ ಕಚೇರಿಗೆ ಕರೆದೊಯ್ಯುವುದಕ್ಕೋಸ್ಕರ ಪೊಲೀಸ್ ವಿಶೇಷ ತಂಡ ನಕಲಿ ಛೋಟಾ ರಾಜನ್ರನ್ನು ಬಳಸಿತ್ತು.
ಇತ್ತ, ನಿಜವಾದ ಛೋಟಾ ರಾಜನ್ ನ್ನು ಆಗಲೇ ಪೊಲೀಸರು ಸಿಬಿಐ ಪ್ರಧಾನ ಕಚೇರಿಗೆ ಕರೆದುಕೊಂಡು ಹೋಗಿದ್ದರು.
48 ಗಂಟೆಗಳ ಯೋಜನೆ: ಮಾಧ್ಯಮದವರ ಕಣ್ತಪ್ಪಿಸಿ ಛೋಟಾ ರಾಜನ್ನ್ನು ಕರೆತರುವುದಕ್ಕಾಗಿ ಪೊಲೀಸ್ ವಿಶೇಷ ವ್ಯವಸ್ಥೆಯನ್ನು ಮಾಡಿತ್ತು. ಅದೇನೆಂದೆರ 60 ಭದ್ರತಾ ಸಿಬ್ಬಂದಿಗಳನ್ನು ಎರಡು ತಂಡಗಳಾಗಿ ವಿಭಜನೆ ಮಾಡಲಾಗಿತ್ತು. 30 ಅಧಿಕಾರಿಗಳ ಒಂದು ತಂಡ ಖೋಟಾ ರಾಜನ್ನ್ನು ಬಳಸಿ ಮಾಧ್ಯಮಗಳ ಕಣ್ತಪ್ಪಿಸುವುದಾಗಿಯೂ, ಅದೇ ಹೊತ್ತಿಗೆ ಇನ್ನೊಂದು ತಂಡ ಛೋಟಾ ರಾಜನ್ ನ್ನು ಸಿಬಿಐ ಪ್ರಧಾನ ಕಚೇರಿಗೆ ಕರೆತರುವುದಾಗಿಯೂ ಯೋಜನೆ ಹೂಡಲಾಗಿತ್ತು.