ಲಖನೌ: ದಾದ್ರಿ ಹತ್ಯೆ ಪ್ರಕರಣ ಕುರಿತು ಅಸಮಾಧಾನ ವ್ಯಕ್ತಪಡಿಸಿ ಸಾಹಿತ್ಯ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ ಸಾಹಿತಿಗಳೆಲ್ಲಾ ಸೌದಿಗೆ ಹೋಗಿ ಅಲ್ಲಿ ಹಂದಿ ಮಾಂಸವನ್ನು ಕೇಳಲಿ, ಹಾಗೆ ಕೇಳಿದ ಬಳಿಕ ಅವರು ಅಲ್ಲಿಂದ ಜೀವಂತವಾಗಿ ಮರಳಿದರೆ, ಅವರ ಪ್ರಶಸ್ತಿಯನ್ನು ಹಿಂದಿರುಗಿಸುವಿಕೆಯನ್ನು ನಾನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ ಎಂದು ವಿಶ್ವ ಹಿಂದೂ ಪರಿಷತ್ ಸಂಘಟನೆ ರಾಷ್ಟ್ರೀಯ ವಕ್ತಾರ ಸುರೇಂದ್ರ ಜೈನ್ ಸಾಹಿತಿಗಳಿಗೆ ಸವಾಲು ಹಾಕಿದ್ದಾರೆ.
ದಾದ್ರಿ ಹತ್ಯೆ ಪ್ರಕರಣವನ್ನು ಖಂಡಿಸಿ ದೇಶದ ಅನೇಕ ಸಾಹಿತಿಗಳು ತಾವು ಪಡೆದಿರುವಂತಹ ಸಾಹಿತ್ಯ ಪ್ರಶಸ್ತಿಗಳು ಹಿಂದಿರುಗಿಸುತ್ತಿದ್ದಾರೆ. ಸಾಹಿತಿಗಳ ಈ ಕ್ರಮದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಯಿಸಿರುವ ವಿಎಚ್ ಪಿ ಮುಖಂಡ ಸುರೇಂದ್ರ ಜೈನ್, ಸೌದಿಯಲ್ಲಿ ಸಾಹಿತಿಗಳು ಹಂದಿ ಕೇಳಿ ಬದುಕುಳಿದರೆ, ಅವರು ಪ್ರಶಸ್ತಿಯನ್ನು ಹಿಂದಿರುಗಿಸುತ್ತಿರುವುದನ್ನು ಸ್ವಾಗತಿಸುತ್ತೇನೆ. ದೇಶದ 2/3 ಷ್ಟು ಜನರು ಮಾಂಸಾಹಾರಿಗಳಾಗಿದ್ದಾರೆ ಎಂದು ನಮಗೆ ತಿಳಿದಿದೆ. ನಾವು ಯಾರದೇ ಆಹಾರ ಪದ್ಧತಿಯನ್ನು ಬದಲಾಯಿಸಬಯಸುವುದಿಲ್ಲ ಆದರೆ, ಹಿಂದೂಗಳಿಗೆ ತಾಯಿ ಸಮಾನವಾದ ಗೋವನ್ನು ಹತ್ಯೆ ಮಾಡುವುದನ್ನು ನಿಷೇಧಿಸಬೇಕು ಎಂದು ಹೇಳಿದ್ದಾರೆ.
ನಾವು ಎಲ್ಲರ ಭಾವನೆಗಳನ್ನು ಗೌರವಿಸುತ್ತೇವೆ. ಮಾಂಸ ತಿನ್ನುವವರಿಂದ ನಮಗೆ ಯಾವುದೇ ರೀತಿ ಸಮಸ್ಯೆ ಇಲ್ಲ. ಆದರೆ, ನಾವು ಪೂಜಿಸುವ ಗೋವನ್ನು ಕಡಿದು ತಿನ್ನುವುದು ಸರಿಯಲ್ಲ. ಆದ್ದರಿಂದ ಗೋಮಾಂಸದ ಮೇಲೆ ನಿಷೇಧವನ್ನು ಹೇರಲೇಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮತ್ತೆ ಮತ್ತೆ ಗೋಹತ್ಯೆಯ ಸುದ್ಧಿಗಳು ಕೇಳಿಬರುತ್ತಿದ್ದು, ಇದು ಹಿಂದೂಗಳಿಗೆ ಸವಾಲು ಹಾಕಿದಂತಿದೆ. ಹೀಗೇ ಮುಂದುವರಿದಲ್ಲಿ ಉತ್ತರಪ್ರದೇಶ ಇನ್ನು ದಂಗಾ ಪ್ರದೆಶ’ವಾಗಿ ಗುರುತಿಸಲ್ಪಡಲಿದೆ ಎಂದು ಜೈನ್ ಎಚ್ಚರಿಸಿದರು.
ದಾದ್ರಿ ಹತ್ಯೆ ಪ್ರಕರಣ ಕುರಿತು ವಿಶ್ವಸಂಸ್ಥೆಗೆ ಪತ್ರ ಬರೆದ ಅಝಮ್ ಖಾನ್ ರ ಕೃತ್ಯವನ್ನು ಮೂರ್ಖತನ ಎಂದ ಅವರು, ಅಖಿಲೇಶ್ ಯಾದವ್ ಅವರು ಇಂತಹವರನ್ನು ತಮ್ಮ ಸಂಪುಟದಿಂದ ವಜಾಗೊಳಿಸಬೇಕು. ಹೀಗೆ ಮಾಡಿದರೆ ಮಾತ್ರ ಹಿಂದೂಗಳು ಸಮಾಜವಾದಿ ಪಾರ್ಟಿಯ ಮೇಲೆ ಭರವಸೆ ಇಡಬಹುದು ಎಂದು ಅವರು ಹೇಳಿದ್ದಾರೆ.