ನವದೆಹಲಿ/ಪಟನಾ: ``ಬಿಜೆಪಿ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತದೆ. ಆದರೆ, ಅವರ ನೈಜ ಅಜೆಂಡಾ ಕೋಮುವಾದ. ಅಭಿವೃದ್ಧಿ ಎನ್ನುವುದು ಮುಖವಾಡ ಮಾತ್ರ. ದಾದ್ರಿ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನ ಅತ್ಯಂತ ಅಪಾಯಕಾರಿ''. ಇದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಾತು.
ಸಿಎನ್ಎನ್ ಐಬಿಎನ್ಗೆ ನೀಡಿದ ಸಂದರ್ಶನದಲ್ಲಿ ಬಿಜೆಪಿ ಹಾಗೂ ಪ್ರಧಾನಿ ವಿರುದ್ಧ ಕಿಡಿಕಾರಿರುವ ನಿತೀಶ್, ಬಿಜೆಪಿಯ ಅಸಹಿಷ್ಣುತೆಯ ನೈಜ ಮುಖ ಈಗ ಬಯಲಾಗುತ್ತಿದೆ ಎಂದಿದ್ದಾರೆ. ಬಿಹಾರ ಚುನಾವಣೆ ಬಗ್ಗೆ ಮಾತನಾಡಿದ ಅವರು, 2014ರ ಲೋಕಸಭೆ ಚುನಾವಣೆಯ ಫಲಿತಾಂಶವು ಮೋದಿ ಅವರ ಪರವಾಗಿ ಬಂದಿರಬಹುದು. ಆದರೆ, ಈ ಚುನಾವಣೆಯು ನಾನು ಸಿಎಂ ಆಗಿ ಬಿಹಾರಕ್ಕೆ ಏನು ಕೊಡುಗೆ ನೀಡಿದ್ದೇನೆ ಎನ್ನುವುದರ ಮೇಲೆ ನಿಂತಿದೆ.
ಇಡೀ ಬಿಹಾರವೇ ನನ್ನನ್ನು ಸಿಎಂ ಆಗಿ ಕಾಣಲು ಇಚ್ಛಿಸುತ್ತದೆ ಎಂದಿದ್ದಾರೆ.
ಕೋಟಾ ನೀತಿಗೆ ಬದ್ಧ: ಅಮಿತ್ ಶಾಆರೆಸ್ಸೆಸ್ ಮುಖ್ಯಸ್ಥ ಭಾಗವತ್ರ ಕೋಟಾ ಹೇಳಿಕೆಯಿಂದಾಗಿ ಜೆಡಿಯುಆರ್ಜೆಡಿಯಿಂದ ತೀವ್ರ ಟೀಕೆಗೆ ಗುರಿಯಾಗಿರುವ ಬಿಜೆಪಿ ಮತ್ತೊಮ್ಮೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಪಟನಾದಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ``ಮೀಸಲು ನೀತಿಬದಲಾವಣೆ ಮಾಡುವುದಕ್ಕೆ ಬಿಜೆಪಿ ಬಯಸುವುದಿಲ್ಲ. ಹಾಲಿ ಕೋಟಾವನ್ನು ನಮ್ಮ ಪಕ್ಷ ಬೆಂಬಲಿಸುತ್ತದೆ. ದಲಿತರು, ಬುಡಕಟ್ಟು ಜನಾಂಗೀಯರು, ಹಿಂದುಳಿದ ವರ್ಗ ಮತ್ತಿತರರಿಗೆ ನೀಡಲಾದ ಸಾಂವಿಧಾನಿಕ ಹಕ್ಕನ್ನು ರಕ್ಷಿಸುವಲ್ಲಿ ನಾವು ಬದ್ಧ'' ಎಂದಿದ್ದಾರೆ.